ADVERTISEMENT

ದೇವನಹಳ್ಳಿ: ಶಿಲ್ಪಕ್ಕೆ ಜೀವ ತುಂಬಿದ ಜಕಣಾಚಾರಿ

ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 9:12 IST
Last Updated 3 ಜನವರಿ 2026, 9:12 IST
ದೇವನಹಳ್ಳಿ ತಾಲೂಕಿನ ಬೀರಸಂದ್ರದಲ್ಲಿನ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಗಣ್ಯರು ಭಾಗಿಯಾಗಿದ್ದರು
ದೇವನಹಳ್ಳಿ ತಾಲೂಕಿನ ಬೀರಸಂದ್ರದಲ್ಲಿನ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಗಣ್ಯರು ಭಾಗಿಯಾಗಿದ್ದರು   

ದೇವನಹಳ್ಳಿ: ತಮ್ಮದೇ ಆದ ಕೆತ್ತನೆಯ ಮೂಲಕ ಶಿಲ್ಪಕಲೆಗೆ ಜೀವ ತುಂಬಿ, ವೃತ್ತಿಯ ಮೌಲ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅವರ ಶಿಲ್ಪಕೌಶಲ್ಯ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಸದಾಕಾಲಕ್ಕೂ ಜೀವಂತವಾಗಿರುವ ಶಿಲ್ಪಕಲೆಗೆ ಜಕಣಾಚಾರಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೌಶಲ್ಯದ ಫಲವಾಗಿ ಶಿಲ್ಪಕಲೆ ಇಂದಿಗೂ ಜೀವಂತವಾಗಿದೆ. ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದ್ದು, ವಿಶ್ವಕರ್ಮರನ್ನು ವಿಶ್ವರೂಪ, ಜಕಣಾಚಾರ್ಯ ಎಂಬ ಹೆಸರುಗಳಿಂದ ಗುರುತಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಶಿಲ್ಪಕಲೆಗೆ ಜಕಣಾಚಾರಿ ನೀಡಿರುವ ಕೊಡುಗೆ ಅಗಾಧವಾದುದು. ಬೇಲೂರು ಚೆನ್ನಕೇಶವ ದೇವಸ್ಥಾನ, ಹಳೆಬೀಡು ಸೋಮನಾಥೇಶ್ವರ ದೇವಸ್ಥಾನ ಹಾಗೂ ಸೋಮನಾಥಪುರ ಕೇಶವ ದೇವಸ್ಥಾನಗಳ ಶಿಲ್ಪಕಲೆಗಳು ಅವರ ವಾಸ್ತುಶಿಲ್ಪ ವೈಭವವನ್ನು ಜಗತ್ತಿಗೆ ಸಾರುತ್ತಿವೆ. ಸೃಷ್ಟಿಯ ಮೂಲಕರ್ತೃ ಎನ್ನಬಹುದಾದ ಜಕಣಾಚಾರಿಯ ಶಿಲ್ಪಕೌಶಲ್ಯ ಇಂದು ವಿಶ್ವದಾದ್ಯಂತ ಚಿರಪರಿಚಿತವಾಗಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲ ಎನ್ನಬಹುದಾದ ಅವರನ್ನು ಜಗತ್ತಿನ ಮೊದಲ ಮುಖ್ಯ ಎಂಜಿನಿಯರ್ ಎಂದು ಹೇಳಬಹುದು ಎಂದು ತಿಳಿಸಿದರು.

ವಿಶ್ವಕರ್ಮ ಸಮುದಾಯವು ತಮ್ಮ ಕುಲಕಸುಬುಗಳ ಜತೆಗೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬಂದು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ವಿಶ್ವಕರ್ಮರ ಕೊಡುಗೆ ಯಾವುದೇ ಒಂದು ಧರ್ಮ, ಜಾತಿ ಅಥವಾ ಕುಲಕ್ಕೆ ಸೀಮಿತವಾಗಿಲ್ಲ. ಪಂಚಕಸಬುಗಳ ಮೂಲಕ ಸಮಾಜವು ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದರು.

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ದೇಗುಲಗಳ ಶಿಲ್ಪಕಲೆ ವಿಶ್ವ ಪಾರಂಪರಿಕ ತಾಣಗಳ ಮಾನ್ಯತೆ ಪಡೆದಿದ್ದು, ಜಕಣಾಚಾರಿಯ ಕಲೆಗೆ ಬೆಲೆ ಕಟ್ಟಲಾಗದು. ಅವರ ಕಾಯಕನಿಷ್ಠೆ, ಆದರ್ಶ ಗುಣ ಮತ್ತು ಪರಿಶ್ರಮದ ಬದುಕನ್ನು ಇಂದಿನ ಪೀಳಿಗೆ ಅರಿಯಬೇಕಿದೆ ಎಂದು ಸೈಯಿದಾ ಆಯಿಷಾ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಜೀವ್ ಸುಲೋಚನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಜಿಲ್ಲಾಧಿಕಾರಿ ಕಚೇರಿ ಆರ್‌ಎಚ್‌ಎಂ ಗಿರೀಶ್, ಜೆಎಚ್‌ಎಂ ಇಂದಿರಮ್ಮ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.