ದೊಡ್ಡಬಳ್ಳಾಪುರ:ತಾಲ್ಲೂಕಿನ ಜಿ. ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಬಾಗಿಲನ್ನು ಗ್ಯಾಸ್ ಕಟರ್ನಿಂದ ಕತ್ತರಿಸಿ ಸುಮಾರು ₹ 3.50 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹ 14 ಲಕ್ಷ ನಗದು ಕಳವು ಮಾಡಿರುವ ಪ್ರಕರಣ ಭೇದಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಕಳ್ಳರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಬ್ಯಾಂಕ್ನಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿನ ದೃಶ್ಯಗಳ ಪರಿಶೀಲನೆ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ತನಿಖಾ ವಿಧಾನವನ್ನು ಅನುಸರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳು ಸೇರಿದಂತೆ ಇತರೆಡೆಯಲ್ಲಿ ಇರುವ ಚಿನ್ನಾಭರಣ ಅಂಗಡಿಗಳ ಮೇಲೂ ಪೊಲೀಸರು ಹದ್ದಿನಕಣ್ಣು ನೆಟ್ಟಿದ್ದಾರೆ. ಕಳ್ಳತನ ಪ್ರಕರಣ ನಡೆದು ಸುಮಾರು 48 ಗಂಟೆ ಕಳೆದಿದ್ದರೂ ಕಳ್ಳರ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ದೊರೆತಿಲ್ಲ ಎನ್ನಲಾಗಿದೆ.
ಗ್ರಾಮದಲ್ಲಿ ಬ್ಯಾಂಕ್ ಇರುವ ಕಟ್ಟಡ ಅತ್ಯಂತ ಹಳೆಯದಾಗಿದೆ. ಬ್ಯಾಂಕ್ಗೆ ಅಗತ್ಯ ಇರುವ ಸುರಕ್ಷತೆಯ ಯಾವುದೇ ಮಾನದಂಡ ಪಾಲಿಸದಿರುವುದೇ ದುಷ್ಕರ್ಮಿಗಳು ಕಳವು ಕೃತ್ಯಕ್ಕೆ ಈ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವ ಕಾರಣವಾಗಿದೆ. ದೊಡ್ಡ ಮೊತ್ತದ ಚಿನ್ನಾಭರಣಗಳನ್ನು ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ದೂರದ ಹಳ್ಳಿಯಲ್ಲಿನ ಬ್ಯಾಂಕ್ನಲ್ಲಿ ಇಡುವ ಅಗತ್ಯ ಇರಲಿಲ್ಲ. ಈ ಬಗ್ಗೆಅಧಿಕಾರಿಗಳು ಕನಿಷ್ಠ ಮುನ್ನೆಚ್ಚರಿಕೆ ವಹಿಸಬೇಕಿತ್ತು ಎನ್ನುವ ಮಾತುಗಳು ಪೊಲೀಸರು ಹಾಗೂ ಗ್ರಾಹಕರಿಂದ ಕೇಳಿಬರುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.