ದೇವನಹಳ್ಳಿ: ನಗರದ ಪಾರಿವಾಳ ಗುಡ್ಡದ ಶ್ರೀಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆಯಲಿರುವ ಕಡೆ ಕಾರ್ತಿಕ ಮಾಸದ ಕಡಲೆಕಾಯಿ ಪರಿಷೆ ಈ ಬಾರಿ ಎರಡು ದಿನ ನಡೆಯಲಿದೆ ಎಂದು ಜೈಮಾರುತಿ ಭಕ್ತಮಂಡಳಿಯ ಸೇವಾ ಸಮಿತಿ ಅಧ್ಯಕ್ಷ ಶಿವನಾಪುರ ರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಕನಿಷ್ಠ 5ರಿಂದ 6 ಸಾವಿರ ಮಕ್ಕಳು, ಯುವಕ, ಯುವತಿಯರು ಮತ್ತು ಹಿರಿಯ ಪರಿಸರ ಪ್ರೇಮಿಗಳು ನ. 24ರಂದು ಭಾನುವಾರ ಬೆಳಿಗ್ಗೆ 6.30ಕ್ಕೆ ನಗರದ ಹಳೆ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀಆಂಜನೇಯ ಸ್ವಾಮಿ ದೇವಾಲಯದಿಂದ ಪರಿಸರಕ್ಕಾಗಿ ನಮ್ಮ ನಡಿಗೆ ಪಾರಿವಾಳದ ಗುಡ್ಡದ ಕಡೆಗೆ ಘೊಷವಾಕ್ಯದೊಂದಿಗೆ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ನಡಿಗೆ ಬಳಿಕ ಬೆಳಿಗ್ಗೆ 9ಕ್ಕೆ ವಿದ್ಯಾರ್ಥಿಗಳಿಗೆ ಗುಡ್ಡಗಾಡು ಓಟದ ಸ್ವರ್ಧೆ, 10.30ಕ್ಕೆ 400 ಮೀ ಓಟ, ಬಳಿಕ 100 ಮತ್ತು 200 ಮೀಟರ್ ಓಟದ ಸ್ಪರ್ಧೆಗಳು (ಪುರುಷರು ಮತ್ತು ಮಹಿಳೆಯರಿಗಾಗಿ), ಪ್ರಾಥಮಿಕ ಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿ, 12.30ಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯ ನಡೆಯಲಿದೆ, ಸಂಜೆ 5ಕ್ಕೆ ಪ್ರೊ.ಎಂ.ಕೃಷ್ಪೇಗೌಡ ತಂಡದವರಿಂದ ಹಾಸ್ಯ ಸಂಜೆ, ನ.25 ರಂದು ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಮಧ್ಯಾಹ್ನ 12ಕ್ಕೆ ದೇವಾಲಯದ ಆವರಣದಲ್ಲಿ ಜನಪದ ನೃತ್ಯಗಳ ಸ್ಪರ್ಧೆ, ದೇವನಹಳ್ಳಿ ಪುರಸಭೆ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ, 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ 3ಕ್ಕೆ ದಿ.ಸಿ.ಅಶ್ವಥ್ ಕಲಾ ಬಳಗ ತಂಡದ ವತಿಯಿಂದ ಸುಗಮ ಸಂಗೀತ ಗಾಯನ ಇರಲಿದೆ ಎಂದು ಹೇಳಿದರು.
ಸೇವಾ ಸಮಿತಿ ಉಪಾಧ್ಯಕ್ಷ ಬಿ.ಕೆ.ಶಿವಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್ ಮಾತನಾಡಿ, ‘ಗುಟ್ಟಹಳ್ಳಿ ಸ.ನಂ. ವ್ಯಾಪ್ತಿಯಲ್ಲಿ 14.35 ಎಕರೆ ಜಾಗದ ಪರಿಮಿತಿಯಲ್ಲಿ ಆಂಜನೇಯ ಸ್ವಾಮಿ, ಗವಿವೀರಭದ್ರಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಭಕ್ತಕನಕ ದಾಸ ಸ್ವಾಮಿ, ಶ್ರೀರಾಮ ಪಾದುಕೆ ಗದ್ದುಗೆ, ಪುಟ್ಟ ತೀರ್ಥಕೊಳ ಇದೆ. ಇತ್ತೀಚೆಗೆ ಪರಿಸರ ಪ್ರೇಮಿಗಳು ಸ್ವಯಂ ಆಗಿ ನಿರ್ಮಾಣ ಮಾಡಿರುವ ಔಷಧ ವನದಿಂದಾಗಿ ನಾಲ್ಕು ಎಕರೆಯಲ್ಲಿನ ಪರಿಸರದೊಂದಿಗೆ ಧಾರ್ಮಿಕ ಭಾವನಾತ್ಮಕ ಸಂಬಂಧಗಳು ಹೆಚ್ಚಾಗಿವೆ. ಕಡಲೇಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿದೆ. ವಿವಿಧ ಸ್ವರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಹೊರತಲ್ಲ. ಶುಚಿತ್ವ ಕಾಪಾಡಿ ಪರಿಸರ ಸಂರಕ್ಷಣೆಗೆ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಮಿತಿ ಗೌರವಾಧ್ಯಕ್ಷ ಮೊಟಪ್ಪ, ಕಾರ್ಯಾಧ್ಯಕ್ಷ ಸತ್ಯನಾರಾಯಣಚಾರ್, ಉಪಾಧ್ಯಕ್ಷ ಎಸ್.ಆರ್.ಮುನಿರಾಜು, ಸದಸ್ಯರಾದ ಡಿ.ಆರ್.ವೆಂಕಟೇಶ್, ಐಸ್ಕ್ರೀಂ ವೆಂಕಟೇಶ್, ಎಂ.ಮುನಿರಾಜು, ಅನ್ನಪೂರ್ಣಮ್ಮ ,ದೇವರಾಜು, ಕಾನೂನು ಸಲಹೆಗಾರ ಡಿ.ಎನ್.ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.