ADVERTISEMENT

ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಿ: ಅರುಳ್ ಕುಮಾರ್

ಆಧುನಿಕತೆಯಿಂದ ಕರ್ನಾಟಕ ಚರಿತ್ರೆ ಮರೆಯುತ್ತಿದ್ದೇವೆ: ಅರುಳ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:18 IST
Last Updated 2 ನವೆಂಬರ್ 2020, 2:18 IST
ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯೋತ್ಸವದಲ್ಲಿ ತ.ನ. ಪ್ರಭುದೇವ್, ಸಂಜೀವನಾಯಕ್, ಜಿ. ಸತ್ಯನಾರಾಯಣ ಅವರಿಗೆ ‘ಕನ್ನಡದ ಕಟ್ಟಾಳು ಪ್ರಶಸ್ತಿ’ ನೀಡಲಾಯಿತು
ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯೋತ್ಸವದಲ್ಲಿ ತ.ನ. ಪ್ರಭುದೇವ್, ಸಂಜೀವನಾಯಕ್, ಜಿ. ಸತ್ಯನಾರಾಯಣ ಅವರಿಗೆ ‘ಕನ್ನಡದ ಕಟ್ಟಾಳು ಪ್ರಶಸ್ತಿ’ ನೀಡಲಾಯಿತು   

ದೊಡ್ಡಬಳ್ಳಾಪುರ:‘ಕನ್ನಡ ನಾಡು, ಸಂಸ್ಕೃತಿಯ ಚಿಂತನೆ ಜೊತೆಗೆ ಭಾಷಾಭಿಮಾನ ಬೆಳೆಸಿಕೊಳ್ಳದ ಹೊರತು ನಾಡನ್ನು ಸಮೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ’ ಎಂದು ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ಡಾ.ರಾಜ್‌ಕುಮಾರ್ ಕಲಾ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ಆಧುನಿಕತೆ ಬೆಳೆದಂತೆ ಹೊರರಾಜ್ಯ, ದೇಶಗಳ ವ್ಯಾಮೋಹಕ್ಕೆ ಒಳಗಾಗಿ ಕರ್ನಾಟಕದ ಚರಿತ್ರೆಯನ್ನು ಮರೆಯುತ್ತಿದ್ದೇವೆ. ಕನ್ನಡ ರಾಜ್ಯೋತ್ಸವದಲ್ಲಿ ನಾಡಿನ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಸಂಕಲ್ಪ ಮಾಡಬೇಕು. ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ADVERTISEMENT

ರೈತ ಹಾಗೂ ಕನ್ನಡಪರ ಹೋರಾಟಗಾರ ಡಾ.ವೆಂಕಟರೆಡ್ಡಿ ಹೆಸರಿನಲ್ಲಿ ‘ಕನ್ನಡ ಕಟ್ಟಾಳು ಪ್ರಶಸ್ತಿ’ಯನ್ನು ತಾಲ್ಲೂಕಿನ ಕನ್ನಡ ಪರ ಹೋರಾಟಗಾರರಾದ ತ.ನ. ಪ್ರಭುದೇವ್, ಸಂಜೀವನಾಯಕ್ ಹಾಗೂ ಜಿ. ಸತ್ಯನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಸದಸ್ಯೆ ರೇಣುಕಮ್ಮ, ತಹಶೀಲ್ದಾರ್ ಟಿ.ಎಸ್. ಶಿವರಾಜ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಕುಮಾರ್, ನಗರಸಭೆ ಪೌರಾಯುಕ್ತ ರಮೇಶ್ ಎಸ್. ಸುಣಗಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹಾಜರಿದ್ದರು.

ಸಮಾರಂಭಕ್ಕೂ ಮುನ್ನ ತಾಲ್ಲೂಕು ಕಚೇರಿ ಆವರಣದಲ್ಲಿ ಉಪ ವಿಭಾಗಾಧಿಕಾರಿ ಅರುಳ್
ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.