ADVERTISEMENT

ಕನ್ನಡ ಅನ್ನದ ಭಾಷೆಯಾಗಲಿ: ಶಾಸಕ ಬಿ. ಶಿವಣ್ಣ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:07 IST
Last Updated 2 ನವೆಂಬರ್ 2020, 2:07 IST
ಆನೇಕಲ್‌ನಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿಯ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಆನೇಕಲ್‌ನಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿಯ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಆನೇಕಲ್: ‘ಕನ್ನಡ ಭಾಷೆಯನ್ನು ಎಲ್ಲಾ ಹಂತಗಳಲ್ಲಿ ಬಳಕೆ ಮಾಡುವ ಮೂಲಕ ಅಭಿಮಾನ ಬೆಳೆಸಬೇಕು. ಈ ಮೂಲಕ ಕನ್ನಡ ಎಲ್ಲರ ಅನ್ನದ ಭಾಷೆಯಾಗಬೇಕು’ ಎಂದು ಶಾಸಕಬಿ. ಶಿವಣ್ಣ ಆಶಿಸಿದರು.

ಪಟ್ಟಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಶ್ರೀಮಂತ ಭಾಷೆ. ಕನ್ನಡ ಕಟ್ಟುವಲ್ಲಿ ಲೇಖಕರು, ಸಾಹಿತಿಗಳು, ಕವಿಗಳು, ಹೋರಾಟಗಾರರು ಹಗಲಿರುಳು ಶ್ರಮಿಸಿದ್ದಾರೆ. ಕನ್ನಡ ಎಂದರೆ ಕೇವಲ ಭಾಷೆಯಲ್ಲ. ನಾಡು, ನುಡಿ, ಸಂಸ್ಕೃತಿ, ಪರಂಪರೆಗಳಿಂದ ಅಲಂಕೃತವಾಗಿರುವ ಒಂದು ಶಕ್ತಿ. ಕನ್ನಡ ನಮ್ಮೆಲ್ಲರ ಮಂತ್ರವಾಗಬೇಕು. ಕನ್ನಡವೇ ನಮ್ಮ ಉಸಿರಾಗಬೇಕು ಎಂದರು.

ADVERTISEMENT

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಬೇಕು. ಪ್ರತಿದಿನ ಕನ್ನಡ ಪತ್ರಿಕೆ ಹಾಗೂ ಕನ್ನಡದ ಖ್ಯಾತ ಕವಿಗಳ ಮೇರುಕೃತಿಗಳನ್ನು ಓದುವ ಹವ್ಯಾಸವನ್ನು ರೂಢಿಸಬೇಕು. ಇದರಿಂದ ಭಾಷೆ, ಸಂಸ್ಕೃತಿ ಬಗ್ಗೆ ವಿಸ್ತಾರವಾದ ತಿಳಿವಳಿಕೆ ಉಂಟಾಗುತ್ತದೆ. ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಸೀಮಿತವಾಗದೇ ಕನ್ನಡ ಭಾಷೆ ನಮ್ಮ ಜೀವನದ ಭಾಗವಾಗಬೇಕು. ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಸಾಧ್ಯವಿರುವ ಎಲ್ಲೆಡೆ ಕನ್ನಡ ಭಾಷೆಯನ್ನು ಬಳಸಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಪುರಸಭಾ ಅಧ್ಯಕ್ಷ ಎನ್‌.ಎಸ್‌. ಪದ್ಮನಾಭ್‌ ಮಾತನಾಡಿ, ಆನೇಕಲ್‌ ತಾಲ್ಲೂಕು ಗಡಿಭಾಗವಾಗಿದೆ. ಈ ಭಾಗದಲ್ಲಿ ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಪ್ರಭಾವದ ನಡುವೆ ಕನ್ನಡ ಭಾಷೆಯನ್ನು ಉಳಿಸುವುದು ಸವಾಲಾಗಿದೆ. ಹಾಗಾಗಿ ವರ್ಷವಿಡೀ ಕನ್ನಡಪರ ಕಾರ್ಯಕ್ರಮಗಳ ಮೂಲಕ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ
ಅವಶ್ಯಕತೆಯಿದೆ ಎಂದರು.

ತಹಶೀಲ್ದಾರ್‌ ಸಿ. ಮಹಾದೇವಯ್ಯ ಮಾತನಾಡಿ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುವ ಮೂಲಕ ಕನ್ನಡ ಪ್ರೀತಿಯನ್ನು ತೋರಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ. ದೇವರಾಜೇಗೌಡ, ಉಪಾಧ್ಯಕ್ಷೆ ಚಂದ್ರಕಲಾ ಟಿ.ವಿ. ಬಾಬು, ಸದಸ್ಯ ಮಹದೇವ್‌, ಪುರಸಭಾ ಉಪಾಧ್ಯಕ್ಷೆ ಎಸ್‌. ಲಲಿತಾ ಲಕ್ಷ್ಮಿನಾರಾಯಣ್‌, ಸದಸ್ಯರಾದ ಮುನಾವರ್‌, ಕೆ. ಶ್ರೀನಿವಾಸ್, ರವಿ, ಸುಧಾ ನಿರಂಜನ್‌, ನಗರ‌ ಕಾಂಗ್ರೆಸ್‌ ಅಧ್ಯಕ್ಷ ಜಿ. ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಮೂರ್ತಿಕುಮಾರ್‌, ಪಿ. ಧನಂಜಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.