ADVERTISEMENT

ಮೂಲ ನಾಟಿ ಹಸುಗಳ ಪಾಲಕ

ನಶಿಸಿ ಹೋಗುತ್ತಿರುವ ತಳಿ ಉಳಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 12:10 IST
Last Updated 2 ಜುಲೈ 2019, 12:10 IST
ಕೊಟ್ಟಿಗೆಯಲ್ಲಿ ನಾಟಿ ಹಸುಗಳು
ಕೊಟ್ಟಿಗೆಯಲ್ಲಿ ನಾಟಿ ಹಸುಗಳು   

ದೇವನಹಳ್ಳಿ: ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾದ ಮೇಲೆ ಪಶುಗಳ ಮೇಲಿನ ಅವಲಂಬನೆ ಕಡಿಮೆ ಆಗಿದೆ. ಪರಿಣಾಮ ನಾಟಿ ಎತ್ತು, ಹಸು, ಹೋರಿಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ. ಇಂತಹ ಸ್ಥಿತಿಯಲ್ಲೂ ಸಾವಿರಾರು ರೂಪಾಯಿ ವ್ಯಯಮಾಡಿ ನಾಟಿ ಹಸು ಸಾಕಣೆ ಮಾಡುತ್ತಿರುವ ಬೀರಸಂದ್ರದ ಮಂಜುನಾಥ್‌ ಗೌಡ ಅವರು ದೇಸಿ ಹಸುಗಳ ತಳಿ ಉಳಿಸಲು ಮುಂದಾಗಿದ್ದಾರೆ.

ಮಲೆನಾಡು ಗಿಡ್ಡ ಮತ್ತು ಬಯಲು ಸೀಮೆ ಹಳ್ಳಿಕಾರ್ ತಳಿಗಳು ಅತ್ಯುತ್ತಮ ಹಾಲು, ಮೊಸರು ನೀಡುವ ತಳಿಗಳು ಎಂಬುದು ಪಶು ವೈದ್ಯಾಧಿಕಾರಿಗಳ ಅಭಿಪ್ರಾಯ. ನಾಟಿ ಹಸುಗಳಿಂದ ಉತ್ಪಾದನೆಯಾಗುವ ಸೆಗಣಿ ಮತ್ತು ಗಂಜಲ ಅನೇಕ ರೋಗಗಳಿಗೆ ರಾಮಬಾಣ. ಆಯುರ್ವೇದ ಔಷಧದಲ್ಲಿ 48 ರೋಗಗಳಿಗೆ ಬಳಕೆ ಮಾಡುವ ಮಾತ್ರೆ, ಕಷಾಯ, ಮುಲಾಮುಗಳಿಗೆ ಹೆಚ್ಚಾಗಿ ಗಂಜಲ ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಬೈಚಾಪುರ ಗ್ರಾಮದ ಪಾರಂಪರಿಕ ನಾಟಿ ವೈದ್ಯ ವೆಂಕಟರಾಜು.

‘ಕೆಲ ದಶಕಗಳ ಹಿಂದೆ ಪ್ರತಿಯೊಂದು ಕುಟುಂಬದಲ್ಲಿ ಹತ್ತಾರು ಹಸುಗಳ ಹಿಂಡು ಇರುತ್ತಿತ್ತು. ಕೃಷಿ ಚಟುವಟಿಗೆ ಬಳಸುತ್ತಿದ್ದ ಹಸುಗಳನ್ನು ಹೊರತುಪಡಿಸಿದ ಹಸುಗಳಿಗೆ ಮೂಗುದಾರ ಹಾಕುತ್ತಿರಲಿಲ್ಲ. ಒಂದು ಗ್ರಾಮದಲ್ಲಿ ಎಲ್ಲಾ ಹಸುಗಳನ್ನು ಮೇಯಿಸಲು ಒಂದಿಬ್ಬರನ್ನು ನೇಮಕ ಮಾಡಿ ಮಾಸಿಕ ಇಂತಿಷ್ಟು ಎಂದು ಹಣ, ದವಸ ಧಾನ್ಯ ನೀಡಲಾಗುತ್ತಿತ್ತು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಹಿರಿಯ ನಾಗರಿಕ ಲಕ್ಷ್ಮಿನಾರಾಯಣಪ್ಪ.

ADVERTISEMENT

‘ಈಗ ಪರಿಸ್ಥಿತಿ ಬದಲಾಗಿದೆ. ನಾಟಿ ಹಸುಗಳ ಪಾಲನೆ ಜತೆಗೆ ಕೃಷಿ ಚಟುವಟಿಕೆ ಅವನತಿಯತ್ತ ಸಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾಟಿ ಹಸುವಿನ ಸಗಣಿ ಮತ್ತು ಗಂಜಲ ಭೂಮಿ ಫಲವತ್ತತೆ ಜತೆಗೆ ಬೆಳೆಗಳ ರೋಗ, ಕೀಟ ಬಾಧೆ ನಿಯಂತ್ರಿಸುತ್ತದೆ. ಈ ನಿಟ್ಟಿನಲ್ಲಿ ರೈತರು ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ ಸಾವಯವ ತೋಟಗಾರಿಕೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವನಾಪುರ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.