ADVERTISEMENT

ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರ ಬದುಕು ಹಸನಾಗಲಿ–ಸಚಿವ ಕೆ.ಎಚ್‌.ಮುನಿಯಪ್ಪ

ಅಣ್ಣೇಶ್ವರ: ವಿಶೇಷ ರೂಪಿಸುವಂತೆ ಸಚಿವ ಕೆ.ಎಚ್‌. ಮುನಿಯಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 18:08 IST
Last Updated 21 ಫೆಬ್ರುವರಿ 2026, 18:08 IST
ದೇವನಹಳ್ಳಿ ತಾಲ್ಲೂಕು ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳಿಗೆ ಹಾಗೂ ಅಂಗವಿಕಲರಿಗೆ ಸೇರಿ ಒಟ್ಟು 1,023 ಕುಟುಂಬಗಳಿಗೆ ವೈಯಕ್ತಿಕ ಯು.ಪಿ.ಎಸ್‌ಗಳನ್ನು  ಸಚಿವ ಕೆ.ಎಚ್. ಮುನಿಯಪ್ಪ ವಿತರಣೆ ಮಾಡಿದರು
ದೇವನಹಳ್ಳಿ ತಾಲ್ಲೂಕು ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳಿಗೆ ಹಾಗೂ ಅಂಗವಿಕಲರಿಗೆ ಸೇರಿ ಒಟ್ಟು 1,023 ಕುಟುಂಬಗಳಿಗೆ ವೈಯಕ್ತಿಕ ಯು.ಪಿ.ಎಸ್‌ಗಳನ್ನು  ಸಚಿವ ಕೆ.ಎಚ್. ಮುನಿಯಪ್ಪ ವಿತರಣೆ ಮಾಡಿದರು   

ದೇವನಹಳ್ಳಿ: ಪಂಚಾಯಿತಿಗೆ ಲಭ್ಯವಾಗುತ್ತಿರುವ ಹೆಚ್ಚಿನ ಆದಾಯವನ್ನು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬಳಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ರಾಜ್ಯದ ಶ್ರೀಮಂತ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಇರುವುದರಿಂದ ಪಂಚಾಯಿತಿಗೆ ಉತ್ತಮ ಆದಾಯ ಬರುತ್ತಿದೆ. ಆದರೆ ಸ್ಥಳೀಯವಾಗಿ ಭೂಮಿ ಕಳೆದುಕೊಂಡವರ ಬದುಕು ಮೇಲೇಳುವಂತೆ ವಿಶೇಷ ಯೋಜನೆಗಳನ್ನು ರೂಪಿಸಬೇಕು. ವಸತಿ, ಉದ್ಯೋಗಾವಕಾಶ, ಸ್ವಯಂ ಉದ್ಯೋಗ ಹಾಗೂ ಸಣ್ಣ ವ್ಯವಹಾರಗಳಿಗೆ ಉತ್ತೇಜನ ನೀಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಬೇಕು ಎಂದರು.

ADVERTISEMENT

ಪಂಚಾಯಿತಿಯ ಅನುದಾನವನ್ನು ಶಾಶ್ವತ ಹಾಗೂ ಜನೋಪಯೋಗಿ ಕಾಮಗಾರಿಗಳಿಗೆ ಬಳಸಬೇಕು. ಬಡವರು, ಹಿಂದುಳಿದವರು ಮತ್ತು ಅವಲಂಬಿತ ಜೀವನ ನಡೆಸುತ್ತಿರುವವರು ಅಭಿವೃದ್ಧಿಯ ಹಾದಿಗೆ ಬರಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದು ಹೇಳಿದರು.

ಅನುದಾನ ಬಳಕೆಯಲ್ಲಿ ಕುಲಂಕುಶ ಪರಿಶೀಲನೆ ನಡೆಸಿ, ಜನತೆಗೆ ನಿಜವಾದ ಪ್ರಯೋಜನ ತರುವ ಯೋಜನೆಗಳನ್ನು ಜಾರಿಗೊಳಿಸುವಂತೆ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಬಯಪ ಅಧ್ಯಕ್ಷ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಜಗನ್ನಾಥ, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ, ಆಡಳಿತಾಧಿಕಾರಿ ಸುನಿಲ್, ಪಿಡಿಒ ಗಂಗರಾಜು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಅಣ್ಣೇಶ್ವರ ಜಿ.ಪಂ ವ್ಯಾಪ್ತಿಯಲ್ಲಿ ಶನಿವಾರ ಯರ್ತಿಗಾನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟಿಸಲಾಯಿತು. ಭುವನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು.

ಕಾಮಗಾರಿ ವಿವರ ₹1.30 ಕೋಟಿ ವೆಚ್ಚದಲ್ಲಿ ಯರ್ತಿಗಾನಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನೆ  ₹1.05 ಕೋಟಿ ವೆಚ್ಚದಲ್ಲಿ ಭುವನಹಳ್ಳಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಅಂದಾಜು ₹2.98 ಕೋಟಿ ವೆಚ್ಚದಲ್ಲಿ ಪಂಚಾಯಿತಿಯ ಶೇ.25 ಅನುದಾನದಲ್ಲಿ ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳಿಗೆ ಹಾಗೂ ಶೇ.05 ಅನುದಾನದಲ್ಲಿ ಅಂಗವಿಕಲರಿಗೆ ಸೇರಿ ಒಟ್ಟು 1023 ಕುಟುಂಬಗಳಿಗೆ ವೈಯಕ್ತಿಕ ಯು.ಪಿ.ಎಸ್ ವಿತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.