ದೇವನಹಳ್ಳಿ: ಕುಂದಾಣ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪದ್ಮನಾಭ್ ಮಂಗಳವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಕುಂದಾಣ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಲೇಔಟ್ ಒಂದರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಭೂಗತವಾಗಿ ಕೇಬಲ್ ಅಳವಡಿಸುವ ಸಲುವಾಗಿ ವಿದ್ಯುತ್ ಗುತ್ತಿಗೆದಾರ ಮಲ್ಲಿಕಾರ್ಜುನ ಎಂಬುವವರ ಬಳಿ ₹5ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಕಾಮಗಾರಿಗೆ ಅನುಮತಿ ನೀಡಲು ₹3 ಲಕ್ಷ ಮುಂಗಡವಾಗಿ ಆರೋಪಿ ಪದ್ಮನಾಭ್, ಲಂಚದ ಹಣ ಪಡೆದಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಮಲ್ಲಿಕಾರ್ಜುನ ದೂರು ನೀಡಿದ್ದರು. ಪಂಚಾಯಿತಿ ಕಾರ್ಯಾಲಯದಲ್ಲಿ ಬಾಕಿ ₹2ಲಕ್ಷ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆಯೂ ಪದ್ಮನಾಭ್ ನೆಲಮಂಗಲ ತಾಲ್ಲೂಕಿನ ಬೂದಿಹಾಳ್ ಗ್ರಾ.ಪಂನಲ್ಲಿ ಸರ್ಕಾರದ ಹಣ ದುರ್ಬಳಕೆ ಆರೋಪ ಎದುರಿಸುತ್ತಿದ್ದು, ಲೋಕಾಯುಕ್ತರು ಈಚೆಗಷ್ಟೇ ಅವರ ಮನೆ ಮೇಲೆ ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.