ADVERTISEMENT

ಆನೇಕಲ್: ಫಲಾನುಭವಿಗಳಿಗೆ ಭೂ ದಾಖಲೆ ವಿತರಣೆ

50 ಬಡಕುಟುಂಬಗಳಿಗೆ ಕೊನೆಗೂ ಸಿಕ್ಕಿದ ನ್ಯಾಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 1:53 IST
Last Updated 5 ನವೆಂಬರ್ 2020, 1:53 IST
ಆನೇಕಲ್ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಬಡ ಕುಟುಂಬಗಳಿಗೆ ಭೂ ದಾಖಲೆಯ ಆದೇಶ ಪತ್ರ ವಿತರಿಸಿದರು
ಆನೇಕಲ್ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಬಡ ಕುಟುಂಬಗಳಿಗೆ ಭೂ ದಾಖಲೆಯ ಆದೇಶ ಪತ್ರ ವಿತರಿಸಿದರು   

ಆನೇಕಲ್: ‘ತಾಲ್ಲೂಕಿನ ಕೊಪ್ಪ ಗ್ರಾಮದ ಜನತಾ ಕಾಲೊನಿಯಲ್ಲಿ ಕಳೆದ 40 ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ಯಾವುದೇ ದಾಖಲಾತಿಗಳಿಲ್ಲದೆ ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಅವರ ಆದೇಶದಿಂದ ಅನುಕೂಲವಾಗಿದೆ’ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಟುಂಬಗಳಿಗೆ ಭೂ ದಾಖಲೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ಕಾಲೊನಿಯ ಸರ್ವೇ ನಂ. 203/1ರ ಗ್ರಾಮ ಠಾಣಾದಲ್ಲಿ 50 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿವೆ. ಆದರೆ, ಯಾವುದೇ ದಾಖಲಾತಿಗಳಿರಲಿಲ್ಲ. ಈ ಜಾಗವನ್ನು ಖಾಸಗಿಯವರು ತಮ್ಮದೆಂದು ಹೇಳಿ ಒಕ್ಕಲೆಬ್ಬಿಸಲು ಮುಂದಾಗಿದ್ದರು ಎಂದು ಹೇಳಿದರು.

ADVERTISEMENT

ಸಂಘಟನೆಯು ಉಪ ವಿಭಾಗಾಧಿಕಾರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಅವರು ದಾಖಲಾತಿ ಪರಿಶೀಲಿಸಿ 1.08 ಎಕರೆಯಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ಸೇರಿದಂತೆ ಎಲ್ಲಾ ಕಂದಾಯ ದಾಖಲಾತಿಗಳನ್ನು ಒದಗಿಸುವಂತೆ ಆದೇಶಿಸಿದ್ದಾರೆ. ಇದರಿಂದ 50 ಕುಟುಂಬಗಳ ಹಲವು ವರ್ಷಗಳ ಸಮಸ್ಯೆಗೆ ಪರಿಹಾರ ದೊರೆತಿದೆ. ದೂರಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಸಂಘಟನೆಯು ಅಭಿನಂದನೆ ಸಲ್ಲಿಸುತ್ತದೆ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೊಪ್ಪ ರಾಮಾಂಜಿ ಮಾತನಾಡಿ, ಜನತಾ ಕಾಲೊನಿಯ ಕುಟುಂಬಗಳಿಗೆ ಕಂದಾಯ ದಾಖಲಾತಿಗಳಿಲ್ಲದೇ ಸರ್ಕಾರಿ ಸೌಲಭ್ಯ ದೊರೆಯುತ್ತಿರಲಿಲ್ಲ. ಈಗ ಸೌಲಭ್ಯ ದೊರೆಯಲಿದೆ ಎಂದರು.

ಸಂಘಟನೆಯ ಪದಾಧಿಕಾರಿಗಳಾದ ಯಡವನಹಳ್ಳಿ ಕೃಷ್ಣಪ್ಪ, ಅಶ್ವಥ್, ಸಬ್‌ಮಂಗಲ ರವಿ, ವಜ್ರಪ್ಪ, ಕೃಷ್ಣಪ್ಪ, ನಾಗರಾಜು, ಮಂಜುನಾಥ್‌, ಮುನಿತಿಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.