ದೊಡ್ಡಬಳ್ಳಾಪುರ: ನಗರದ ಪಾಲನಜೋಗಹಳ್ಳಿಯಲ್ಲಿನ ಶ್ರೀಮಾರುತಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಜಕ್ಕಸಂದ್ರ ನಾರಾಯಣಪ್ಪ ಆಂಗ್ಲ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 16ನೇ ವಾರ್ಷಿಕೋತ್ಸವವನ್ನು ನೆಗಿಲು ಪೂಜೆ ಮಾಡುವ ಮೂಲಕ ವಿಶೇಷವಾಗಿ ಉದ್ಘಾಟಿಸಲಾಯಿತು.
ರಾಷ್ಟ್ರೋತ್ಥಾನ ಗೋ ಶಾಲೆಯ ಪ್ರಮುಖ ಡಾ. ಜೀವನ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಶಿಕ್ಷಣ ಮುಖ್ಯ. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಮಕ್ಕಳ ಬೆಳವಣಿಗೆಗೆ ಪೂರಕವಾಗಿರುವುದರಿಂದ ಪೋಷಕರು ಹೆಚ್ಚಿನ ಒತ್ತು ನೀಡಬೇಕು ಎಂದರು.
ಪರಿಸರವಾದಿ ಕೆ.ಗುರುದೇವ್ ಮಾತನಾಡಿ, ಪೋಷಕರು ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸುವ ಬದಲು ಸಹಪಠ್ಯ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಯುವಂತೆ ಮಾಡಬೇಕು ಎಂದರು.
ಶ್ರೀಮಾರುತಿ ವಿದ್ಯಾನಿಕೇತನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಂದ ಛದ್ಮವೇಷ, ಭರತನಾಟ್ಯ ಸೇರಿದಂತೆ ಹಲವು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್. ಲಕ್ಷ್ಮೀನಾರಾಯಣ್, ಗೌರವ ಸಹಕಾರ್ಯದರ್ಶಿ ಜಯಲಕ್ಷ್ಮಮ್ಮ, ಪ್ರಗತಿಪರ ರೈತ ಮುನಿಕೃಷ್ಣಪ್ಪ, ಟಿಎಪಿಎಂಸಿಎಸ್ ನಿರ್ದೇಶಕ ಪ್ರಕಾಶ್ಕುಮಾರ್, ಬಿಂದು ಪ್ರೌಢ ಶಾಲೆ ಮುಖ್ಯಶಿಕ್ಷಕ ಎಚ್.ವಿ. ರಾಜಣ್ಣ, ಕಿರುತೆರೆ ಬಾಲನಟಿ ಗಮನ ಜಿ.ಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರದೀಪ್ಕುಮಾರ್, ಶಾಲೆಯ ಆಡಳಿತಾಧಿಕಾರಿ ಪಿ.ವಿ. ರಮೇಶ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ ಜಯಲಕ್ಷ್ಮಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ರಾಘವೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.