
ವಿಜಯಪುರ (ದೇವನಹಳ್ಳಿ): ಹೋಬಳಿಯ ಕೋರಮಂಗಲ ಗ್ರಾಮದ ಸುತ್ತಮುತ್ತ ಚಿರತೆಯೊಂದು ಓಡಾಡಿರುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ್ದು, ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಚಿರತೆ ಗ್ರಾಮದ ಸುತ್ತಮುತ್ತಲೂ ಓಡಾಡಿರುವುದಕ್ಕೆ ಗ್ರಾಮದ ಜನರು ಭಯಭೀತರಾಗಿದ್ದು, ಬುಧವಾರ ರಾತ್ರಿ ಗ್ರಾಮದ ಸುತ್ತಮುತ್ತ ಗ್ರಾಮಸ್ಥರು ಪಟಾಕಿ ಸಿಡಿಸಿ ಬೆದರಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸಹ ಭೇಟಿ ನೀಡಿದ್ದು, ಚಿರತೆ ಬಂದಿರುವ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.
‘ಕಳೆದ ಒಂದು ವಾರದಿಂದ ಕೋರಮಂಗಲ ಸಮೀಪದ ಸುತ್ತಮುತ್ತಲೂ ಅರಣ್ಯ ಸಿಬ್ಬಂದಿ ಓಡಾಡಿದ್ದೇವೆ. ಎಲ್ಲೂ ಸಹ ಚಿರತೆ ಹೆಜ್ಜೆ ಗುರುತು, ಯಾವುದೇ ಪ್ರಾಣಿ ತಿಂದಿರುವ ಬಗ್ಗೆಯೂ ಮಾಹಿತಿ ಲಭ್ಯವಿಲ್ಲ. ಗ್ರಾಮದ ಸುತ್ತಮುತ್ತ ಚಿರತೆ ಬಂದಿದೆ ಎಂಬುದು ಬರೀ ಊಹಾಪೋಹಾ ಅಷ್ಟೇ. ಇದಕ್ಕೆ ಗ್ರಾಮಸ್ಥರು ಕಿವಿಗೊಡಬೇಡಿ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಬೀರೇಶ್ ಹೇಳಿದ್ದಾರೆ.
ಚಿರತೆ ಗ್ರಾಮದ ಸುತ್ತಮುತ್ತ ಓಡಾಡಿದ್ದರೆ ಕುರಿ, ಮೇಕೆ, ಕೋಳಿ, ಇತರೆ ಜಾನುವಾರಿನ ಮೇಲೆ ದಾಳಿ ಮಾಡಬೇಕಿತ್ತು. ಅಲ್ಲದೇ ಚಿರತೆಗೆ ನಾಯಿ ಪ್ರಿಯಾವಾದ ಆಹಾರ. ಗ್ರಾಮದಲ್ಲಿ ನಾಯಿ ಕಾಣೆಯಾಗಿರುವ ಬಗ್ಗೆಯೂ ಪರಿಶೀಲಿಸಲಾಗಿದೆ. ಆ ರೀತಿಯಲ್ಲಿ ಕಂಡು ಬಂದಿಲ್ಲ. ಈ ಹಿಂದೆಯೂ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವ ಬಗ್ಗೆಯೂ ಯಾವುದೇ ದೂರು ಬಂದಿಲ್ಲ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.