ದೊಡ್ಡಬಳ್ಳಾಪುರ: ‘ರಾಜಕೀಯ ಕ್ಷೇತ್ರದಲ್ಲಿ ತೊಡಗಿದ ನಂತರ ಸಾಹಿತ್ಯ ಕ್ಷೇತ್ರದ ಸೇವೆ ಸಲ್ಲಿವುದು ಕಷ್ಟದ ಕೆಲಸ. ಸಾಹಿತ್ಯ ಕ್ಷೇತ್ರದ ಪ್ರೇಮದಿಂದ ಕವನ ಸಂಕಲನವನ್ನು ರಚಿಸಿ ರಾಜಕೀಯ ಹೊರತಾದ ಸಾಹಿತ್ಯ ಪ್ರೇಮಿಗಳನ್ನು ಒಂದೆಡೆ ಸೇರಿಸುತ್ತಿರುವುದು ಶ್ಲಾಘನೀಯ’ ಎಂದು ಚಿತ್ರದುರ್ಗದ ಶ್ರೀಕ್ಷೇತ್ರ ಗೊಲ್ಲಗಿರಿ ಅಖಿಲ ಭಾರತ ಯಾದವ ಮಹಾಸಂಸ್ಥಾಪನ ಮಠದ ಪೀಠಾಧ್ಯಕ್ಷ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದರು.
ರಾಜ್ಕುಮಾರ್ ಕಲಾ ಮಂದಿರದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಸದಸ್ಯ ಕಣಿವೇಪುರ ಸುನಿಲ್ ಕುಮಾರ್ ಬರೆದಿರುವ ‘ಸೂರ್ಯ ಚಿಮ್ಮಿದ ಪ್ರಥಮ ಕಿರಣ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಪದವಿ ಪಡೆದವರಿಂದ ಮಾತ್ರ ಸಾಹಿತ್ಯ ಎಂಬುದು ತಪ್ಪು ಗ್ರಹಿಕೆ. ದಾಸ ಸಾಹಿತ್ಯ, ಬಸವ ಸಾಹಿತ್ಯವನ್ನು ಹಿಂದಿಕ್ಕಲು ಯಾವ ಜ್ಞಾನಪೀಠ ಪಡೆದವರಿಂದಲೂ ಸಾಧ್ಯವಿಲ್ಲ. ದಾಸರು, ಬಸವ ಶಿವಶರಣರು ಲೋಕಾನುಭವದ ವಿಚಾರಧಾರೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಮನುಷ್ಯ ಸಮಾಜಮುಖಿಯಾಗಿ ಕೆಲಸ ಮಾಡಲು ಸಾಹಿತ್ಯ ಓದು ಅಗತ್ಯ’ ಎಂದರು.
ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ‘ಅಕ್ಷರ ಜ್ಞಾನ, ಭಾಷಾ ಪರಿಜ್ಞಾನ ಹೊಂದಿರುವವರು ಸಾಹಿತ್ಯ ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದಿಲ್ಲ. ಕೆಲವು ಸಾಹಿತಿಗಳು ಪ್ರತಿಯೊಬ್ಬರಲ್ಲೂ ಅರ್ಥ ಮಾಡಿಸುವಂತಹ ಸಾಲುಗಳನ್ನು ಅರ್ಥಗರ್ಭಿತವಾಗಿ ರಚಿಸುತ್ತಾರೆ.ಜೀವನದಲ್ಲಿ ತಾಕಲಾಟಗಳು ಬಾರದೆ ಹೋದರೆ ಏನು ಸಾಧಿಸಲಾಗುವುದಿಲ್ಲ. ಕಲೆಯನ್ನು, ಕವಿತೆಯನ್ನು ತನ್ನನ್ನು ತಾನು ಆಳವಾಗಿ ಇಳಿದಾಗ ಮಾತ್ರ ಅವುಗಳಲ್ಲಿನ ಸತ್ವ ನಮಗೆ ತಿಳಿಯುತ್ತದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ, ಉಪಾಧ್ಯಕ್ಷೆ ಮಿನಾಕ್ಷಿ ಕೆಂಪಣ್ಣ, ಸದಸ್ಯರಾದ ಡಿ.ಸಿ.ಶಶಿಧರ್, ನಾರಾಯಣಗೌಡ, ಜಿ.ಶಂಕರಪ್ಪ, ಶಿವಮ್ಮ, ಕರವೆ(ಪ್ರವೀಣಶೆಟ್ಟಿಬಣದ) ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಉಪಾಧ್ಯಕ್ಷ ಪುಟ್ಟೇಗೌಡ, ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಸಾಹಿತಿ ಕೆ.ಮಹಾಲಿಂಗಯ್ಯ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮಿಳಾ ಮಹದೇವ್, ಮುಖಂಡರಾದ ಎ.ನರಸಿಂಹಯ್ಯ, ರಾಜಗೋಪಾಲ್, ಡಿ.ಜಿ.ಕೃಷ್ಣಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.