ADVERTISEMENT

ಉದ್ಯಮಶೀಲರಾಗಲು ಹಲವು ಅವಕಾಶ

ಮಹಿಳಾ ಉದ್ಯಮಶೀಲತೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 14:17 IST
Last Updated 7 ಫೆಬ್ರುವರಿ 2019, 14:17 IST
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು   

ಪ್ರಗತಿಯತ್ತ ಸಾಗುತ್ತಿರುವ ದೇಶದಲ್ಲಿ ಉದ್ಯಮಶೀಲರಾಗಲು ಮಹಿಳೆಯರಿಗೆ ಅನೇಕ ಅವಕಾಶಗಳಿವೆ ಎಂದು ದಿಶಾ ಐಇಸಿ ಔಟ್‌ರೀಚ್ ತರಬೇತಿ ಕೇಂದ್ರ ಜಿಲ್ಲಾ ವ್ಯವಸ್ಥಾಪಕಿ ರತ್ನ ಹೇಳಿದರು.

ಇಲ್ಲಿನ ಸಿದ್ಧಾರ್ಥ ಸೇವಾ ಸಂಸ್ಥೆ ಮಹಿಳಾ ತರಬೇತಿ ಕೇಂದ್ರದಲ್ಲಿ ನಡೆದ ‘ಉದ್ಯಮಶೀಲತೆ ತರಬೇತಿ ಕಾರ್ಯಾಗಾರ’ದಲ್ಲಿ ಮಾತನಾಡಿದರು.

ಪ್ರಸ್ತುತ 152 ದೇಶದಲ್ಲಿ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮುಂಚೂಣಿಗೆ ತರಲು ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆ ನೇರವಾಗಿ ಸರ್ಕಾರಗಳಿಗೆ ಅನುದಾನ ನೀಡುತ್ತಿದೆ. ಇದರೊಂದಿಗೆ ತರಬೇತಿಯೂ ನೀಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ತರಬೇತಿ ಪಡೆದು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಗ್ರಾಮಾಂತರ ಜಿಲ್ಲೆಗೆ ವಾರ್ಷಿಕ ₹50 ಕೋಟಿ ನೀಡಲಿದೆ. ಇದರ ಪ್ರಯೋಜನೆ ಪಡೆದು ಉದ್ಯಮ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಜಿಕೆವಿಕೆ ಕೌಶಲ ಅಭಿವೃದ್ಧಿ ಸಂಪನ್ಮೂಲ ವ್ಯಕ್ತಿ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕೌಶಲ ಅಭಿವೃದ್ಧಿ ಶೇ3ರಷ್ಟು ಮಾತ್ರ ಇದೆ. ವಿಶ್ವದಲ್ಲಿ ಜಪಾನ್‌ ಅತಿಹೆಚ್ಚು ಕೌಶಲ ಅಭಿವೃದ್ಧಿ ಹೊಂದಿದೆ. ಎಲ್ಲಿ ಮಹಿಳೆಯರ ಆದಾಯ ಹೆಚ್ಚಿರುತ್ತದೆಯೋ ಅಲ್ಲಿ ಉತ್ತಮ ಆರ್ಥಿಕ ಪ್ರಗತಿ ಸಾಧ್ಯವಿದೆ. ಮಹಿಳೆಯರು ಉದ್ಯಮದಲ್ಲಿ ತೊಡಗಿಸಿಕೊಂಡರೆ ದೇಶ ಸಬಲವಾಗಲಿದೆ ಎಂದು ಹೇಳಿದರು.

ಸಿದ್ಧಾರ್ಥ ಸೇವಾ ಸಂಸ್ಥೆ ಅಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ ಮಾತನಾಡಿ, ಸಿದ್ಧಾರ್ಥ ಸೇವಾ ಸಂಸ್ಥೆ ಕಳೆದ 12 ವರ್ಷಗಳಿಂದ ಹೊಲಿಗೆ ಮತ್ತು ಕೈಮಗ್ಗದಲ್ಲಿ ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸಲು ಶ್ರಮಿಸುತ್ತಿದೆ. ಪ್ರಸ್ತುತ ವಿದ್ಯುತ್ ಮಗ್ಗದಲ್ಲಿಯೂ ತರಬೇತಿ ನೀಡುತ್ತಿದೆ. 2,200 ಮಹಿಳೆಯರಿಗೆ ಬ್ಯಾಂಕಿನ ಮೂಲಕ ಸಾಲ ಕೊಡಿಸಿ ಸಣ್ಣ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ನೆರವು ನೀಡಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿದರು. ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಎ.ನಾರಾಯಣಸ್ವಾಮಿ, ಮುಖಂಡ ಸುಬ್ಬೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.