ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿರುವ ಸ್ಪೀಕರ್ ಅವರ ಕಾರ್ಯವೈಖರಿಯನ್ನು ಖಂಡಿಸುವುದಾಗಿ ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾರದರ್ಶಕಆಡಳಿತ ಜಾರಿಗೊಳಿಸುವುದಾಗಿ ಹೇಳುವ ಸರ್ಕಾರಗಳು, ವಿಧಾನಸಭೆಯಲ್ಲಿ ನಡೆಯುವಂತಹ ಕಲಾಪಗಳ ನೇರ ಪ್ರಸಾರ ಮಾಡಲು ಮಾಧ್ಯಮಗಳಿಗೆ ಅನುಮತಿ ನಿರಾಕರಿಸಿವೆ. ಅವರು ಕೊಡುವ ದೃಶ್ಯಾವಳಿಗಳನ್ನು ಮಾತ್ರ ಪ್ರಕಟಗೊಳಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ’ ಎಂದರು.
ವಿಧಾನಸಭೆಯಲ್ಲಿ ನಡೆಯುವ ಚರ್ಚೆಗಳಲ್ಲಿ ರಾಜಕಾರಣಿಗಳ ಬಣ್ಣ ಬಯಲಾಗುತ್ತದೆ. ಜನ ಪ್ರಜ್ಞಾವಂತರಾಗುತ್ತಾರೆ ಎನ್ನುವ ಭಯದಲ್ಲಿ ಇಂತಹ ತೀರ್ಮಾನ ಮಾಡಿರುವುದು ಸರಿಯಲ್ಲ. ಒಂದು ವೇಳೆ ಈ ನಿರ್ಧಾರವನ್ನು ಕೈಬಿಡದಿದ್ದರೆ ರಾಜ್ಯವ್ಯಾಪಿ ಉಗ್ರಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.
ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅಶ್ವಥಪ್ಪ ಮಾತನಾಡಿ, ವಿಧಾನಸಭೆಯಲ್ಲಿ ಈ ಹಿಂದೆ ಸ್ವೀಕರ್ಗಳಾಗಿದ್ದವರೂ ಇಂತಹ ಪ್ರಯತ್ನಕ್ಕೆ ಕೈ ಹಾಕಿ ಕೈಬಿಟ್ಟಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಾಧ್ಯಮಗಳ ಹಕ್ಕು ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿವೆ ಎಂದರು.
ಇಂತಹ ನಿರ್ಧಾರದಿಂದ ಮಾಧ್ಯಮಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತಹ ಪ್ರಯತ್ನವಾಗುತ್ತಿದೆ. ಜನಸಾಮಾನ್ಯರ ಧ್ವನಿಯನ್ನು ಅಡಗಿಸಲಿಕ್ಕೂ ಸರ್ಕಾರ ಪರೋಕ್ಷವಾಗಿ ಮುಂದಾಗಿರುವುದು ಸರಿಯಲ್ಲ. ಮುಖ್ಯಮಂತ್ರಿ ಸೇರಿದಂತೆ ಸ್ವೀಕರ್ ಅವರು, ವಿವೇಚನೆಯಿಂದ ವರ್ತನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಎಂ.ಡಿ. ರಾಮಚಂದ್ರಪ್ಪ ಮಾತನಾಡಿ, ರಾಷ್ಟ್ರ, ಅಂತರರಾಷ್ಟ್ರೀಯ ಸೇರಿದಂತೆ ಸ್ಥಳೀಯವಾಗಿ ನಡೆಯುವಂತಹ ವಿದ್ಯಮಾನಗಳನ್ನು ಪ್ರಸಾರ ಮಾಡಿ, ಜನರ ಧ್ವನಿಯಾಗಿ ಕೆಲಸ ಮಾಡುವುದರ ಜೊತೆಗೆ, ಸರ್ಕಾರದ ಲೋಪದೋಷಗಳನ್ನು ತೋರಿಸುವ ಮಾಧ್ಯಮಗಳಿಗೆ ಇರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಹ ನಿರ್ಧಾರ ಮಾಡಿರುವ ಬಿಜೆಪಿ ಸರ್ಕಾರ ಹಿಟ್ಲರ್ ಸಂಸ್ಕೃತಿಯನ್ನು ಮರೆಯುತ್ತಿದೆ ಎಂದರು.
ಇದು ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವುದನ್ನು ಮರೆಯಬಾರದು. ಮಾದ್ಯಮಗಳು ಇರುವಾಗಲೇ ಸದನದಲ್ಲಿ ನೀಲಿ ಚಿತ್ರಗಳ ವೀಕ್ಷಣೆಯಾಗಿದೆ. ಮಾಧ್ಯಮಗಳನ್ನು ಹೊರಗಿಟ್ಟರೆ ಮತ್ತೇನು ಮಾಡುತ್ತಾರೋ ಎಂದರು. ಆದ್ದರಿಂದ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.