ದೇವನಹಳ್ಳಿ: ಇಲ್ಲಿನ ಮನುಗೊಂಡನಹಳ್ಳಿ ಗ್ರಾಮದಲ್ಲಿ ವಿವಿಧ ರೋಗಿಗಳಿಗೆ ಅಗತ್ಯ ಮಾತ್ರೆ ಮತ್ತು ಔಷಧಿಗಳನ್ನು ಸಮಾಜಸೇವಕ ಶಿವಾಜಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾಜಿ, ‘ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾರ್ಮಿಕರಿಗೆ ಬಡಕುಟುಂಬದಲ್ಲಿನ ವಯೋವೃದ್ಧರಿಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ನಗರ ಪ್ರದೇಶಗಳಿಗೆ ಹೋಗಿ ಅಗತ್ಯ ಮಾತ್ರೆ ಮತ್ತು ಔಷಧಿ ಖರೀದಿಸಲು ಹಣದ ಕೊರತೆಯ ಜತೆಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಅನೇಕರು ತೊಂದರೆ ಅನುಭವಿಸುವಂತಾಗಿದೆ’ ಎಂದರು.
‘ಕುಂದಾಣ, ಕೊಯಿರಾ ಮತ್ತು ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 28ಕ್ಕೂ ಹೆಚ್ಚು ಗ್ರಾಮಗಳಲ್ಲಿ 1,200ಕ್ಕೂ ಹೆಚ್ಚು ವಿವಿಧ ರೋಗಗಳಿಂದ ಬಳಲುತ್ತಿರುವ ವಯೋವೃದ್ಧರು, ಗರ್ಭಿಣಿಯರು, ಅಂಗವಿಕಲರು ಮತ್ತು ಕಾರ್ಮಿಕರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಲಿವರ್ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಿ ವೈದ್ಯರು ನೀಡುವ ಮಾರ್ಗಸೂಚಿ ಅನ್ವಯ ಬರೆದುಕೊಟ್ಟಿರುವ ಚೀಟಿಯನ್ನು ಪಡೆದು ಮಾತ್ರೆ ಖರೀದಿಸಿ ವಿತರಿಸಲಾಗುತ್ತಿದೆ’ ಎಂದರು.
‘ಪ್ರತಿಯೊಬ್ಬ ರೋಗಿಗಳ ಮತ್ತು ಕುಟುಂಬಗಳ ಸದಸ್ಯರಿಗೆ ಮೊಬೈಲ್ ನಂಬರ್ಗಳನ್ನು ಗ್ರೂಪ್ಗೆ ಒಳಪಡಿಸಿ ಯಾವ ರೋಗಿಗಳಿಗೆ ಎಷ್ಟು ಪ್ರಮಾಣದಲ್ಲಿ ಮಾತ್ರೆ ಮತ್ತು ಔಷಧ ಬೇಕು ಎಷ್ಟು ದಿನದವರೆಗೆ ಬೇಕು ಎಂಬ ಮಾಹಿತಿ ಮೇರೆಗೆ ಪಟ್ಟಿ ಸಿದ್ಧಪಡಿಸಿ ಬೆಂಗಳೂರಿನಿಂದ ಖರೀದಿಸಲಾಗುತ್ತಿದೆ. ಕೆಲವೊಂದು ಮಾತ್ರೆಗಳು(30 ಮಾತ್ರೆಗಳ ಶೀಟ್) 1,500 ರಿಂದ 1,800 ರೂವರೆಗೆ ಬೆಲೆಯಿದೆ ಆದರೂ ರೋಗಿಗಳ ಸಂಕಷ್ಟ ಅರಿತು ನೀಡುತ್ತಿದ್ದೇವೆ’ ಎಂದು ಹೇಳಿದರು. ಲಾಕ್ಡೌನ್ ಆದ ಒಂದೆರಡು ದಿನದಿಂದ ಈವರೆಗೆ ಎಲ್ಲಾ ರೀತಿಯ ಮಾತ್ರೆಗಳನ್ನು ರೋಗಿಗಳ ಅಗತ್ಯತೆಗೆ ತಕ್ಕಂತೆ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಶಿವಾಜಿಯವರು ಮಾಡುತ್ತಿದ್ದಾರೆ. ಅವರ ಪ್ರಯತ್ನ ಅನೇಕ ರೋಗಿಗಳಿಗೆ ಅನುಕೂಲ’ ಎನ್ನುತ್ತಾರೆ ಫಲಾನುಭವಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.