ADVERTISEMENT

ವ್ಯಾಪಾರಿಗಳ ಮೀರಿಸುವ ಮಕ್ಕಳ ವ್ಯವಹಾರ

ವಿಜಯಪುರದ ಮೆಟ್ರಿಕ್ ಮೇಳದಲ್ಲಿ ಮಕ್ಕಳ ಜತೆಗೂಡಿದ ಪೋಷಕರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:22 IST
Last Updated 3 ಜುಲೈ 2018, 16:22 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಆಯೋಜಿಸಿದ್ದ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಉದ್ಘಾಟನೆ ಮಾಡಿದರು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಆಯೋಜಿಸಿದ್ದ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಉದ್ಘಾಟನೆ ಮಾಡಿದರು   

ವಿಜಯಪುರ: ಬಗೆ ಬಗೆಯ ತಾಜಾ ತರಕಾರಿಗಳು, ಬಣ್ಣ ಬಣ್ಣದ ಉಡುಪುಗಳು, ಕ್ರೀಡಾ ಸಾಮಗ್ರಿ, ವಿವಿಧ ಖಾದ್ಯಗಳು ಮತ್ತು ಸೌಂದರ್ಯ ವರ್ಧಕಗಳು, ಚಿಣ್ಣರ ಚೀರಾಟ ಇದೆಲ್ಲ ಕಂಡುಬಂದದ್ದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಆಯೋಜಿಸಿದ್ದ 2018–19 ನೇ ಸಾಲಿನ ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ.

ಶಾಲಾ ಆವರಣ ಮಂಗಳವಾರದ ಮಟ್ಟಿಗೆ ಮಿನಿ ಬಜಾರ್‌ ನಿರ್ಮಾಣವಾದಂತೆ ಭಾಸವಾಗಿತ್ತು. ಮೆಟ್ರಿಕ್‌ ಮೇಳದ ಅಂಗವಾಗಿ ವಿವಿಧ ತರಗತಿಗಳ ವಿದ್ಯಾರ್ಥಿಗಳು ದಿನದ ಮಟ್ಟಿಗೆ ಪಕ್ಕಾ ವ್ಯಾಪಾರಿಗಳಾಗಿ ಮಾರ್ಪಟ್ಟಿದ್ದರು.

ತರಕಾರಿ, ತೆಂಗಿನ ಕಾಯಿ, ದಿನಬಳಕೆ ವಸ್ತುಗಳು, ಆಟಿಕೆಗಳು, ಸೌಂದರ್ಯ ವರ್ಧಕಗಳು, ಸಿಹಿ ತಿನಿಸುಗಳು, ಥರಾವರಿ ಚಾಕೊಲೇಟ್‌ಗಳು, ಬಿಸ್ಕೇಟ್‌ಗಳು, ಉಡುಪುಗಳು, ದಿನಸಿ, ಖಾದ್ಯ ತೈಲಗಳು, ಮಸಾಲೆ ಪದಾರ್ಥಗಳು, ಮಾಂಸಾಹಾರದ ಹೊಟೇಲುಗಳು, ಹಣ್ಣುಗಳು, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು, ಬಳೆಗಳು, ಫ್ಯಾನ್ಸಿ ಆಭರಣಗಳು, ಸಿದ್ಧ ಉಡುಪುಗಳು, ಆಕರ್ಷಕ ಗೊಂಬೆಗಳು ಹೀಗೆ ಹೊರಗಿನ ಮಾರುಕಟ್ಟೆಯಲ್ಲಿ ಏನೇನು ಸಿಗಬೇಕೋ ಎಲ್ಲ ವಸ್ತುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಕ್ಕಳ ಮಳಿಗೆಗಳಲ್ಲಿ ಮಾರಾಟಕ್ಕಿದ್ದವು.

ADVERTISEMENT

ಗ್ರಾಹಕರನ್ನು ಸೆಳೆಯಲು ಕೆಲವು ಮಕ್ಕಳು ಅಗ್ಗದ ಬೆಲೆಗೆ ವಸ್ತುಗಳನ್ನು ಕೂಗಿ ಕರೆದರೆ ಮತ್ತೆ ಕೆಲ ಮಕ್ಕಳು ಎರಡು ವಸ್ತು ಕೊಂಡರೆ ಒಂದು ಉಚಿತ ಎಂಬ ಆಕರ್ಷಣೆಯ ತಂತ್ರ ಉಪಯೋಗಿಸಿದರು. ಮಾಮೂಲು ಸಂತೆಯಂತೆ ಚೌಕಾಸಿ ವ್ಯಾಪಾರವೂ ನಡೆಯಿತು.

ಕೆಲವು ಮಳಿಗೆಗಳ ಮಾಲೀಕ ಮಕ್ಕಳಂತೂ ಚತುರ ವ್ಯವಹಾರಸ್ಥರಂತೆ ವ್ಯಾಪಾರ ವಹಿವಾಟು ನಡೆಸಿದರು. ಶಾಲಾ ಮಕ್ಕಳ ಪೋಷಕರಲ್ಲದೆ, ಶಾಲೆಯ ಸುತ್ತ ಮುತ್ತಲಿನ ನಾಗರಿಕರೂ ಈ ಮಕ್ಕಳ ಸಂತೆಗೆ ಬಂದು ಖರೀದಿ ನಡೆಸಿದರು. ಹಣ್ಣು, ತರಕಾರಿ, ಸೊಪ್ಪು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳು ಸಾವಯವ ಪದಾರ್ಥ ಖರೀದಿಸಿ ತಿಂದು ಆರೋಗ್ಯವಾಗಿರಿ ಎನ್ನುವ ಮೂಲಕ ಆರೋಗ್ಯ ಕಾಳಜಿಯನ್ನು ಮೆರೆಯುವ ಮೂಲಕ ಸಾವಯವ ಕೃಷಿಯಿಂದ ಆರೋಗ್ಯ ವೃದ್ಧಿಸುತ್ತದೆ ಎನ್ನುವ ಸಂದೇಶ ಸಾರುತ್ತಿದ್ದರು.

ಮೇಳ ಉದ್ಘಾಟಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಜಾತಿ ಮತದ ಭೇದ ಭಾವ ತೊರೆದು ವಿಶ್ವಮಾನವರಾಗಿ ಬೆಳೆಯಬೇಕು ಎಂದರು. ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸುವ ಮತ್ತು ಹಣ ಚಲಾವಣೆಯಾಗುವ ರೀತಿಯನ್ನು ತಿಳಿಸುವ ಉದ್ದೇಶದಿಂದ ಮೆಟ್ರಿಕ್‌ ಮೇಳ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು. ಲಾಭದ ಒಂದು ಭಾಗವನ್ನು ದುರ್ಬಲರಿಗೆ ನೆರವಾಗುವ ಉದ್ದೇಶಗಳಿಗೆ ಬಳಸಬೇಕು ಎಂದು ಹೇಳಿದರು.

ಸದಾ ಶಾಲೆ, ಓದು, ಪರೀಕ್ಷೆ ಹೀಗೆ ಒತ್ತಡದಲ್ಲೇ ಇರುವ ಮಕ್ಕಳ ಪ್ರಬುದ್ಧತೆಯನ್ನು ಪ್ರದರ್ಶಿಸುವ ಮೂಲಕ ಆರ್ಥಿಕ ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳಲು, ಮನೋಲ್ಲಾಸಗೊಳ್ಳಲು ಮೆಟ್ರಿಕ್‌ ಮೇಳ ಸಹಕಾರಿಯಾಗುತ್ತದೆ. ಲಾಭ-ನಷ್ಟದ ಅರಿವು ಅವರಿಗಾಗುತ್ತದೆ ಎಂದರು.

‘ಸ್ಪರ್ಧಾ ಜಗತ್ತಿನಲ್ಲಿ ಪುಸ್ತಕದ ಜ್ಞಾನದ ಜತೆಗೆ ಪ್ರಾಪಂಚಿಕ ವ್ಯವಹಾರದ ಜ್ಞಾದಿನದ ಮಟ್ಟಿಗೆ ನವೂ ಅಗತ್ಯ. ಮಕ್ಕಳು ಉಲ್ಲಾಸದಿಂದ ಮೆಟ್ರಿಕ್‌ ಮೇಳದಲ್ಲಿ ಭಾಗವಹಿಸಿದ್ದಾರೆ. ನಾವು ಪೋಷಕರಾಗಿ ಉತ್ತೇಜನ ನೀಡುತ್ತಿದ್ದೇವೆ’ ಎಂದು ಪೋಷಕರಾದ ಮಂಜುನಾಥ್, ನಾರಾಯಣಸ್ವಾಮಿ ಹೇಳಿದರು.

ಮುಖಂಡರಾದ ಚಿಕ್ಕನಹಳ್ಳಿ ಸುಬ್ಬಣ್ಣ, ಮರವೇ ನಾರಾಯಣಸ್ವಾಮಿ, ಕೆ.ಮಂಜುನಾಥ್, ಸದಾಶಿವಯ್ಯ, ಕೆಂಚೇಗೌಡ, ಶಿಕ್ಷಕರಾದ ಪಿ.ಎಂ. ಕೊಟ್ರೇಶ್, ನಾರಾಯಣ್, ಡಾ.ರಮೇಶಪ್ಪ, ರಾಮಾಂಜು, ಮುನಿಶಾಮಣ್ಣ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.