ಮಾಗಡಿ: ಮನೆಯೇ ಮೊದಲ ಶಾಲೆ ಎನ್ನುವುದು ಕಾಲಕ್ರಮೇಣ ಮೊಬೈಲೇ ಮೊದಲ ಶಾಲೆಯಾಗಿ ಪರಿವರ್ತನೆಯಾಗುತ್ತಿರುವುದು ಈ ಕಾಲಘಟ್ಟದ ದುರಂತ. ಮಕ್ಕಳು, ಯುವಕರು, ಹಿರಿಯರು ಹಾಗೂ ನಾವೆಲ್ಲರೂ ಬೇಗ ಮೊಬೈಲ್ ಗೀಳಿನಿಂದ ಹೊರ ಬರಬೇಕು ಎಂದು ಖ್ಯಾತ ಜನಪದ ಗಾಯಕ ಶಿವಾರ ಉಮೇಶ್ ಹೇಳಿದರು.
ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಾವರೆಕೆರೆಯ ಶಿಕ್ಷಕ ಚಿಕ್ಕವೀರಯ್ಯನವರ ಮನೆಯಂಗಳದಲ್ಲಿ ಶನಿವಾರ ಪುಸ್ತಕ ದಸರಾ ಹಾಗೂ ಸಂಗೀತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್ ಫೋನ್ ಅನ್ನು ಶೈಕ್ಷಣಿಕ ದೃಷ್ಟಿಯಿಂದ, ಸಂಪರ್ಕದ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟು ಬಳಸಿ, ಉಳಿದ ಸಮಯವನ್ನು ಪುಸ್ತಕ ಓದಲು, ಆಟಗಳನ್ನು ಆಡಲು, ಸಂಗೀತ ಮತ್ತು ನೃತ್ಯಭ್ಯಾಸ ಮಾಡಲು, ಗೆಳೆಯರ ಜೊತೆ ಹಿರಿಯರ ಜೊತೆ ಸಮಯ ಕಳೆಯಲು ಮೀಸಲಿಡಿ. ಇಲ್ಲದಿದ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಖಂಡಿತ ಹದಗೆಡುತ್ತದೆ ಎಂದು ಹೇಳಿದರು.
ಶಿಕ್ಷಕರ ಮನೆಯಂಗಳದಲ್ಲಿ ಪುಸ್ತಕದ ದಸರ ಹಾಗೂ ಸಂಗೀತ ದಸರಾ ಪ್ರಯುಕ್ತ ಮೊದಲ ಅವಧಿಯಲ್ಲಿ ತಾವರೆಕೆರೆ ವೆಂಕಟಚಲಯ್ಯನವರ
ಮಂಗಳವಾದ್ಯ ಸಂಗೀತವಾದ್ಯ, ಎರಡನೆಯ ಅವಧಿಯಲ್ಲಿ ಚನ್ನೇನಹಳ್ಳಿ ವೇದ ವಿಜ್ಞಾನ ಗುರುಕುಲದ ಹಿರಿಯ ವಿದ್ಯಾರ್ಥಿಗಳು ಹಾಗೂ ಸಂಗೀತ ಶಿಕ್ಷಕಿ ಮೀನಾಕ್ಷಿ ಮತ್ತು ತಂಡದವರಿಂದ ಲಲಿತ ಸಹಸ್ರ ನಾಮ ಪಾರಾಯಣ, ಮೂರನೇ ಅವಧಿಯಲ್ಲಿ ಪುಸ್ತಕ ಪೂಜೆ, ನೆರೆದಿದ್ದವರಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿ, ಪುಸ್ತಕ ಮಂಥನ ಕಾರ್ಯಕ್ರಮ ನಡೆಯಿತು.
ತಾವರೆಕೆರೆ ಹಠಯೋಗಿ ಕಾಳಪ್ಪ ಸ್ವಾಮಿ ಮಠಾಧ್ಯಕ್ಷ ರೇವಣಸಿದ್ದಯ್ಯ, ಶಿಕ್ಷಕ ಚಿಕ್ಕವೀರಯ್ಯ, ಗಾಯಕರಾದ ನವೀನ್, ಶಿಕ್ಷಕ ಮಾಚೋಹಳ್ಳಿ, ಶ್ರೀವಾಣಿ ವಿದ್ಯಾ ಸಂಸ್ಥೆ ಪ್ರಾಂಶುಪಾಲ ವಿಶ್ವನಾಥ್, ರೇವಣಸಿದ್ದಯ್ಯ, ಜೈರಾಮ್, ವಿಜಯ ಕುಮಾರಿ, ಡಾ.ಮಂಜುಳಾ, ಅಯ್ಯಪ್ಪ ಸ್ವಾಮಿ ಗಿರೀಶ್, ಲಾಸ್ಯ ತಾಂಡವ ನೃತ್ಯ ಶಿಕ್ಷಕಿ ಅನುಷಾ, ನಾಗರಾಜು, ಈರಮ್ಮ, ಪಿ. ದಿವ್ಯ, ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.