ದೇವನಹಳ್ಳಿ: ಇಲ್ಲಿನ ಕೋಡಗುರ್ಕಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು ಬೆಳಿಗ್ಗೆ ಯೋಗಾಭ್ಯಾಸದ ನಂತರ ವಾಯುವಿಹಾರ ನಡೆಸಿದರು.
ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಬೆಳಿಗ್ಗೆ ಉಪಾಹಾರದ ಸಂದರ್ಭದಲ್ಲಿ ಚರ್ಚಿಸಿದರು. ರಾಜಕೀಯ ಬೆಳವಣಿಗೆಯನ್ನು ದಿನಪತ್ರಿಕೆ ಮತ್ತು ಖಾಸಗಿ ಸುದ್ದಿವಾಹಿನಿಗಳ ಮೂಲಕ ಗಮನಿಸುತ್ತಿರುವ ಶಾಸಕರು ದಿನದಿಂದ ದಿನಕ್ಕೆ ಮತ್ತು ಕ್ಷಣಕ್ಷಣಕ್ಕೂ ಜಟಿಲವಾಗುತ್ತಿರುವ ಬಗ್ಗೆ ಚರ್ಚಿಸಿದರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
‘ಸರ್ಕಾರ ಏನೇ ಆಗಲಿ; ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ನಮ್ಮ ನಿಷ್ಠೆ. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿ, ‘ಕೋಡಗುರ್ಕಿ ಗ್ರಾಮದಲ್ಲಿ ಊರ ಹಬ್ಬದ ಅಂಗವಾಗಿ ಬಾಡೂಟ ಏರ್ಪಡಿಸಲಾಗಿತ್ತು. ಸ್ಥಳೀಯ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ನಮ್ಮ ಪಕ್ಷದವರು. ಅವರನ್ನು ಸಂಪರ್ಕಿಸಿ ಊಟಕ್ಕೆ ಒತ್ತಾಯಿಸಿದ್ದೇನೆ. ಜತೆಗೆ ಶಾಸಕರಾದ ಬಂಡೆಪ್ಪ ಕಾಶೆಂಪೂರ ಮತ್ತು ಶ್ರೀನಿವಾಸಮೂರ್ತಿ ಬಂದು ಊಟ ಮಾಡಿಕೊಂಡು ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ’ ಎಂದು ಕೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.