ಹೊಸಕೋಟೆ: ನಾನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರಿಂದ ಹಣ ಪಡೆದಿದ್ದು ನಿಜ. ಆದರೆ ಹಣವನ್ನು ಅವರಿಗೆ ಹಿಂತಿರುಗಿಸಿದ್ದೇನೆ ಎಂದು ಮಾಲೂರು ಶಾಸಕ ನಂಜೇಗೌಡ ಹೇಳಿದ್ದಾರೆ.
ತಾಲ್ಲೂಕಿನ ಜಡಗೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಪಕ್ಷದಿಂದ ತಲಾ ₹ 2 ಕೋಟಿ ಕೊಟ್ಟಿದ್ದರು. ಆದರೆ, ನನಗೆ ಹಣ ಬಂದಿರಲಿಲ್ಲ. ಸಿದ್ದರಾಮಯ್ಯನವರನ್ನು ವಿಚಾರಿಸಿದಾಗ ಎಂಟಿಬಿ ನಾಗರಾಜ್ ಕೊಡುತ್ತಾರೆ ಎಂದರು. ಆಗ ನಾನು ನಾಗರಾಜ್ ಅವರಿಂದ ₹ 2 ಕೋಟಿ ಜತೆಗೆ ವೈಯಕ್ತಿಕವಾಗಿ ₹ 1 ಕೋಟಿ ಅವರಿಂದ ಪಡೆದಿದ್ದು ನಿಜ. ಆದರೆ ಚುನಾವಣೆ ಮುಗಿದ ವಾರದೊಳಗೆ ಆ ಹಣವನ್ನು ಅವರು ಕೊಟ್ಟ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದೆ ಎಂದರು.
ಆದರೆ ಎಂಟಿಬಿ ನಾಗರಾಜ್ ಅವರು ಬಿಜೆಪಿ ಸೇರ್ಪಡೆಯಾಗುವಾಗ ನನ್ನನ್ನೂ ಸಹ ಬರುವಂತೆ ಕರೆದರು. ಆಗ ನಾನು ಹೋಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ 20 ದಿನಗಳ ನಂತರ ಕರೆಮಾಡಿ ₹ 2 ಕೋಟಿ ಹಿಂತಿರಗಿಸುವಂತೆ ಕೇಳಿದರು. ನಾನು ಸಿದ್ದರಾಮಯ್ಯರನ್ನು ಕೇಳಬೇಕೆಂದಾಗ ಅವರು ಯಾವ ದೊಡ್ಡ ಮನುಷ್ಯ ಎಂದು ಸಿದ್ದರಾಮಯ್ಯನವರನ್ನು ನಿಂದಿಸಿದರು. ನನ್ನ ಬಗ್ಗೆ ಇಷ್ಟೆಲ್ಲಾ ಕೇಳಿಸಿಕೊಂಡು ನನಗೆ ಬೇಸರವಾಗಿ ಇಂದು ₹ 2 ಕೋಟಿ ಹಣವನ್ನು ನನ್ನ ಮಗನ ಮುಖಾಂತರ ಎಂಟಿಬಿ ನಾಗರಾಜ್ ಅವರ ಖಾತೆಗೆ ವರ್ಗಾವಣೆ ಮಾಡಿದ್ದೇನೆ. ಇನ್ನಾದರೂ ನನ್ನನ್ನು ಹೆದರಿಸುವುದು ಬೆದರಿಸುವುದನ್ನು ಬಿಡಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.