ADVERTISEMENT

ದೊಡ್ಡಬಳ್ಳಾಪುರ ‌| ಮುಡಾ ಪ್ರಕರಣ ಬಿಜೆಪಿ ಕುತಂತ್ರ: ಶೋಷಿತ ಸಮುದಾಯ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:10 IST
Last Updated 25 ಸೆಪ್ಟೆಂಬರ್ 2024, 14:10 IST
ದೊಡ್ಡಬಳ್ಳಾಪುರದ ಅಂಬೇಡ್ಕರ್‌ ಪ್ರತಿಮೆ ಮುಂದೆ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು
ದೊಡ್ಡಬಳ್ಳಾಪುರದ ಅಂಬೇಡ್ಕರ್‌ ಪ್ರತಿಮೆ ಮುಂದೆ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ: ಮುಡಾ ಪ್ರಕರಣವು ಬಿಜೆಪಿಯ ಕುತಂತ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕವು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ನಗರದ ಅಂಬೇಡ್ಕರ್‌ ಪ್ರತಿಮೆ ಮುಂದೆ ಜಮಾಯಿಸಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಶೋಷಿತ ಸಮುದಾಯ ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲೇ ಪ್ರಧಾನಿ ನರೇಂದ್ರಮೋದಿ ಅವರ ಜನವಿರೋಧಿ ಆಡಳಿತವನ್ನು ನೇರವಾಗಿ ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳಲಾಗಿದೆ. ಅಕ್ರಮ ಡಿನೋಟಿಫೀಕೇಷನ್ ಮಾಡಿ ಜಾಮೀನಿನ ಮೇಲೆ ಹೊರಗಡೆ ಇರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಗೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಕೆ.ಎಂ.ಕೃಷ್ಣಮೂರ್ತಿ, ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬಡಜನರ ಅಭ್ಯುದಯಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿರುವುದು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಬಲ್ಲ ನಾಯಕರಾಗಿ ಸಿದ್ದರಾಮಯ್ಯ ಜನಪ್ರಿಯರಾಗಿದ್ದಾರೆ. ಇದನ್ನು ತಡೆಯಲು ಕಮಲ-ದಳ ಮೈತ್ರಿ ಮುಖಂಡರು ಕುತಂತ್ರ ರೂಪಿಸಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಅವರು ಮುಡಾ ನಿವೇ‍ಶನ ಹಂಚಿಕೆಗೆ ಯಾವುದೇ ಶಿಫಾರಸು ಮಾಡಿಲ್ಲ. ಪಾರ್ವತಿ ಅವರು ಸಿದ್ದರಾಮಯ್ಯ ಅವರ ಪತ್ನಿ ಎನ್ನುವ ಕಾರಣಕ್ಕಾಗಿಯೇ ಅಧಿಕಾರ ದುರುಪಯೋಗ ಆಗಿದೆ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯಪಾಲರು ಖಾಸಗಿ ದೂರಿನ ತನಿಖೆಗೆ ಅನುಮತಿ ನೀಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ದೆಹಲಿಯು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಂತ್ಯಗೊಳಿಸಲು ರಾಜಭವನವನ್ನು ದುರ್ಬಳಕೆ ಬಳಸಿಕೊಂಡಿದೆ. ಬಿಜೆಪಿ ಮುಖಂಡರ ಹಿಂಬಾಗಿಲಿನ ಕುತಂತ್ರ ರಾಜಕಾರಣ ಕರ್ನಾಟಕದಲ್ಲಿ ಫಲಿಸುವುದಿಲ್ಲ ಎಂದರು.

ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ಆಂಜನಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಗ್ರಾಮಾಂತರ ಅಧ್ಯಕ್ಷ ಎಂ.ಬೈರೇಗೌಡ, ಮುಖಂಡರಾದ ರೇವತಿಅನಂತರಾಮ್, ಬಿ.ಮುನಿರಾಜು, ವಿನೋದಕುಮಾ‌ರ್, ರಾಧಾ, ಮಾಧವಿ, ರಾಘವ, ಶಶಿಕಲಾ, ನಗರಸಭೆ ಸದಸ್ಯರಾದ ಆನಂದ್‌, ಎಚ್.ಎಸ್.ಶಿವಶಂಕರ್, ಚಂದ್ರಮೋಹನ್‌, ಕಾಂತರಾಜ್, ಶಿವು, ಶ್ರೀನಗರ ಬಷೀರ್, ಕುರುಬರಹಳ್ಳಿ ಕೆಂಪಣ್ಣ,ಬಾಶೆಟ್ಟಿಹಳ್ಳಿ ರಾಜಣ್ಣ, ಜನಪರ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.