ಹೊಸಕೋಟೆ ತಾಲ್ಲೂಕಿನ ಮುಗಬಾಳ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸಂದೀಪ್
ಹೊಸಕೋಟೆ: ತಾಲ್ಲೂಕಿನ ಮುಗಬಾಳ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಂ.ಕೃಷ್ಣಪ್ಪ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪುತ್ರ ಸಂದೀಪ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೆರವಾಗಿದ್ದ ಗ್ರಾಪಂ ಸದಸ್ಯ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿತ್ತು. ಗ್ರಾಮಸ್ಥರ ಒಮ್ಮತದ ಮೇರೆಗೆ ಮೃತ ಸದಸ್ಯ ಜಿ.ಎಂ.ಕೃಷ್ಣಪ್ಪ ಅವರ ಪುತ್ರ ಸಂದೀಪ್ ಅವರನ್ನೇ ಅವಿರೋದವಾಗಿ ಆಯ್ಕೆ ಮಾಡಲಾಗಿದೆ. ಸಂದೀಪ್ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಪ್ರಕಾಶ್ ಘೋಷಿಸಿದರು.
ಗ್ರಾಮದ ಹಿರಿಯ ಮುಖಂಡ ರಾಜಾರಾವ್, ‘ಗ್ರಾಮದ ಹಿರಿಯ ಮುಖಂಡರಾಗಿದ್ದ ಜಿ.ಎಂ.ಕೃಷ್ಣಪ್ಪನವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆ ತೆರವಾಗಿದ್ದ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಗದಿಯಾಗಿತು. ಗ್ರಾಮಸ್ಥರೆಲ್ಲ ಒಟ್ಟುಗೂಡಿ. ಎಲ್ಲಾ ಸದಸ್ಯರ ಮತ್ತು ಗ್ರಾಮದ ಮತದಾರರ ಒಮ್ಮತದ ಮೇರೆಗೆ ಯಾವುದೇ ರಾಜಕೀಯ ಇಲ್ಲದೆ ಜಿ.ಎಂ.ಕೃಷ್ಣಪ್ಪ ಅವರ ಪುತ್ರ ಸಂದೀಪ್ ಅವರನ್ನೇ ಅವಿರೋಧವಾಗಿ ಆಯ್ಕೆ ಆಗುವಂತೆ ನೋಡಿಕೊಂಡಿದ್ದೇವೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯತಿಯ ಅದ್ಯಕ್ಷೆ ಭಾಗ್ಯ ನಾಗರಾಜ್, ಉಪಾದ್ಯಕ್ಷೆ ನಾರಾಯಣಮ್ಮ ತಿಮ್ಮಪ್ಪ, ಸದಸ್ಯರಾದ ಹಿರಿಯ ಮುಖಂಡ ವಿ.ನಾಗರಾಜು, ಅನ್ವರ್ ಬೇಗ್, ಮುಖಂಡರಾದ ಕೆಂಬಳಿಗಾನಹಳ್ಳಿ ಬೂಸ ನಾಗರಾಜು, ಶ್ರೀರಾಮ್, ರಾಮಮೂರ್ತಿ, ಇಮ್ರಾನ್ ಖಾನ್, ಪಿ.ಡಿ.ಒ ಲೋಕೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.