ADVERTISEMENT

ಜನರ ಆರೋಗ್ಯಕ್ಕೆ ಬಮೂಲ್‌ ಒತ್ತು: ಶರತ್‌ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 7:03 IST
Last Updated 20 ನವೆಂಬರ್ 2022, 7:03 IST
ಮುತ್ಕೂರು ಗ್ರಾಮದಲ್ಲಿ ಬಮೂಲ್‌ನಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿ ನೀರಿನ ಕ್ಯಾನ್‌ ವಿತರಿಸಿದರು
ಮುತ್ಕೂರು ಗ್ರಾಮದಲ್ಲಿ ಬಮೂಲ್‌ನಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿ ನೀರಿನ ಕ್ಯಾನ್‌ ವಿತರಿಸಿದರು   

ಹೊಸಕೋಟೆ: ‘ಗ್ರಾಮೀಣ ಭಾಗದ ಜನರ ಬದುಕು ಸುಂದರವಾಗಿ ಅರಳಲು ಹಾಗೂ ಸದೃಢ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರದ ಜತೆಗೆ ಶುದ್ಧ ಕುಡಿಯುವ ನೀರು ಸೇವನೆ ಅಗತ್ಯ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರು ಗ್ರಾಮದ ದಾಮೋದರ್ ನಗರದಲ್ಲಿ ಮುತ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಹಕಾರದೊಂದಿಗೆ ಬಮೂಲ್‌ನಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಬಮೂಲ್ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುತ್ತಿದೆ. ಆರೋಗ್ಯಯುತ ಸಮಾಜ ನಿರ್ಮಿಸುವ ಮೂಲಕ ಜನರ ಜೀವನವನ್ನು ಸಮೃದ್ಧಗೊಳಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.

ADVERTISEMENT

ಬಮೂಲ್ ಉಪಾಧ್ಯಕ್ಷ ಕೆ.ಎಂ.ಎಂ. ಮಂಜುನಾಥ್ ಮಾತನಾಡಿ, ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಸಹಕಾರ ಕ್ಷೇತ್ರಕ್ಕೆ ಮಹಿಳೆಯರು ಪಾದಾರ್ಪಣೆ ಮಾಡುತ್ತಿರುವುದರಿಂದ ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಹೈನುಗಾರಿಕೆಯು ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಉಚಿತವಾಗಿ ಕುಡಿಯುವ ನೀರಿನ ಕ್ಯಾನ್‌ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಮಂಜುಳಾ ವೆಂಕಟರಾಜ್, ಉಪಾಧ್ಯಕ್ಷೆ ಸುನಂದಮ್ಮ, ಪಂಚಾಯಿತಿ ಅಧ್ಯಕ್ಷೆ ಸುಷ್ಮಾ, ಉಪಾಧ್ಯಕ್ಷ ರಾಜ್‌ಕುಮಾರ್, ಸದಸ್ಯ ಅಕ್ರಂ, ಮುಖಂಡರಾದ ದೇವರಾಜ್, ಭೋದನಹೊಸಳ್ಳಿ ಪ್ರಕಾಶ್ ಹಾಜರಿದ್ದರು.

ಹೈಮಾಸ್ಟ್‌ ದೀಪ ಉದ್ಘಾಟನೆ

‘ದೇವಾಲಯ ನಿರ್ಮಾಣದಿಂದ ಗ್ರಾಮದಲ್ಲಿ ಸಾಮರಸ್ಯದ ಜೀವನ ಸಾಧ್ಯ. ಒಗ್ಗಟ್ಟಿನ ಬಾಳ್ವೆಗೆ ದೇವಾಲಯಗಳು ಸಹಕಾರಿಯಾಗಿವೆ’ ಎಂದುಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲ್ಲೂಕಿನ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಶೆಟ್ಟಿಹಳ್ಳಿಯಲ್ಲಿ ಶ್ರೀಜಗನ್ ಜ್ಯೋತಿದೇವಿ ದೇವಾಲಯ, ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಹೈಮಾಸ್ಟ್ ದೀಪದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕು. ದೇವಾಲಯಗಳು ಭಾವೈಕ್ಯ ಸಾರುವ ಕೇಂದ್ರಗಳಾಗಿದ್ದು ಆತ್ಮಶುದ್ಧಿಯೊಂದಿಗೆ ದೈವೀ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದ್ವೇಷ, ಅಸೂಯೆ ಆಚೆಗಿನ ಬದುಕನ್ನು ಗ್ರಹಿಸಬೇಕು ಎಂದು ಸಲಹೆ ನೀಡಿದರು.

ವಾಗಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಶ್, ಸದಸ್ಯರಾದ ದೇವಶೆಟ್ಟಹಳ್ಳಿ ಕುಮಾರ್, ಮಾಕನಹಳ್ಳಿ ಮಧುಕುಮಾರ್, ರಾಮಚಂದ್ರ, ವಾಗಟ ಸಿದ್ದಪ್ಪ, ಕಣ್ಣೆಕಲ್ ಮೋಹನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.