ದೇವನಹಳ್ಳಿ:ಇಲ್ಲಿನ ಶ್ರೀನಗರೇಶ್ವರ ಸ್ವಾಮಿಗೆ ವಾರ್ಷಿಕ ಆರಿದ್ರೋತ್ಸವ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವದ ಮೆರವಣಿಗೆ ನಡೆಸಲಾಯಿತು.
ಅಯೋಧ್ಯನಗರ ಆರ್ಯವೈಶ್ಯ ನಗರ್ತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಎಸ್.ರಮೇಶ್ ಕುಮಾರ್ ಮಾತನಾಡಿ, ಶತಮಾನಗಳಿಂದ ಈ ಉತ್ಸವ, ಧಾರ್ಮಿಕ ವಿಧಿವಿಧಾನ ನಡೆಸಲಾಗುತ್ತಿದೆ. ಇದರ ಅನ್ವಯ ಬೆಳಗಿನ ಜಾವ ಸೂರ್ಯ ಉದಯಕ್ಕಿಂತ ಮೊದಲು ವಿಘ್ನೇಶ್ವರನಿಗೆ ಪೂಜೆ, ಶಿವನಿಗೆ ರುದ್ರಾಭಿಷೇಕ, ವಿವಿಧ ಹೂವುಗಳ ಅಲಂಕಾರ ಫಲಪುಪ್ಪಗಳ ಸಮರ್ಪಣೆಯೊಂದಿಗೆ ಪೂಜೆ ನಡೆಸಲಾಗುತ್ತದೆ. ನಂತರ ಮೂಲ ವಿಗ್ರಹಕ್ಕೆ ವಿವಿಧ ಬಣ್ಣದ ವಸ್ತ್ರಲಂಕಾರ, ಪುಪ್ಪಾಲಂಕಾರದಿಂದ ಪೂಜೆ ಸಲ್ಲಿಸಲಾಗುವುದು. ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಮೂಲ ಪಾರಂಪರಿಕ ಧಾರ್ಮಿಕ ಆಚರಣೆ ನಡೆಸುತ್ತಿದ್ದರೂ ಆಧುನಿಕತೆ ಬೆಳೆದಂತೆ ಭಕ್ತರಲ್ಲಿ ನಿರಾಸಕ್ತಿ ಹೆಚ್ಚುತ್ತಿದೆ. ಸನಾತನ ಪರಂಪರೆಯನ್ನು ಉಳಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಯೋಧ್ಯನಗರ ಆರ್ಯ ವೈಶ್ಯ ನಗರ್ತ ಸಂಘ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರಾದ ಶಂಕರ್, ದೇವರಾಜ್, ಬಸವರಾಜ್, ಶಿವಶಂಕರ್, ಚಂದ್ರಮೌಳಿ, ಆರ್ಚಕವೇದ ಮೂರ್ತಿ ಪರಮಶಿವಾರಾಧ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.