ADVERTISEMENT

ಹೊಸಕೋಟೆ ಸ್ವಾಭಿಮಾನದ ಗೆಲುವು : ಶರತ್ 

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 10:13 IST
Last Updated 11 ಡಿಸೆಂಬರ್ 2019, 10:13 IST
ಚುನಾವಣಾಧಿಕಾರಿ ನಾಗರಾಜ್‌ ವಿಜೇತ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಪ್ರಮಾಣ ಪತ್ರ ನೀಡಿದರು
ಚುನಾವಣಾಧಿಕಾರಿ ನಾಗರಾಜ್‌ ವಿಜೇತ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಪ್ರಮಾಣ ಪತ್ರ ನೀಡಿದರು   

ದೇವನಹಳ್ಳಿ: ಹೊಸಕೋಟೆ ವಿಧಾನಸಭೆ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕೆ ಗೆಲುವು ಸಿಕ್ಕಿದೆ ಎಂದು ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಅಕಾಶ್ ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಮಾತನಾಡಿದ ಅವರು,‘ಆರು ದಶಕಗಳಿಂದ ನಮ್ಮ ಕುಟುಂಬ ರಾಜಕೀಯ ನಡೆಸುತ್ತಾ ಬಂದಿದೆ. ಸೋಲು – ಗೆಲುವು ಸಮನಾಗಿ ಸ್ವೀಕರಿಸಿದ್ದೇವೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಡಿಮೆ ಅಂತರದಿಂದ ಸೋತಿದ್ದೆ’ ಎಂದು ಹೇಳಿದರು.

ಎರಡೂವರೆ ತಿಂಗಳಿಂದ ಕ್ಷೇತ್ರದಲ್ಲಿ ಸಂಚರಿಸಿ ವಿವಿಧ ಗ್ರಾಮಗಳ ಮುಖಂಡರನ್ನು ಸಂಪರ್ಕಿಸಿ ಚುನಾವಣೆಗೆ ಸ್ವರ್ಧಿಸುವ ಕುರಿತು ಚರ್ಚೆ ನಡೆಸಿದ್ದೆ. ಪಕ್ಷ ಟಿಕೆಟ್‌ ನೀಡದಿದ್ದರೂ ಕಣಕ್ಕೆ ಇಳಿಯುವಂತೆ ಕಾರ್ಯಕರ್ತರ ಒತ್ತಡದಿಂದ ಸ್ಪರ್ಧೆ ಮಾಡಬೇಕಾಯಿತು. ಇದರಿಂದ ಗೆಲುವು ಸುಲಭವಾಯಿತು ಎಂದು ಹೇಳಿದರು.

ADVERTISEMENT

ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಕುಮಾರಸ್ವಾಮಿ, ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ,‘ನಮ್ಮ ತಂದೆ ಬಚ್ಚೇಗೌಡ ಬೆಂಬಲ ನೀಡಲಿಲ್ಲ. ಬಿಜೆಪಿ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ. ಎರಡೂವರೆ ತಿಂಗಳಿಂದ ಅವರೊಂದಿಗೆ ಮಾತನಾಡಿಲ್ಲ. ಎಂ.ಟಿ.ಬಿ ನಾಗರಾಜ್‌ಗೆ ಬಿಜೆಪಿ ಟಿಕೆಟ್‌ ನೀಡಿ ತಂದೆ – ಮಗನನ್ನು ದೂರ ಮಾಡಿತು’ ಎಂದು ಕುಟುಕಿದರು.

ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಹೊಸಕೋಟೆ ಕ್ಷೇತ್ರದವರಲ್ಲ. ಬೇರೆ ಕ್ಷೇತ್ರದಿಂದ ಬಂದವರು. ‘ಯುವಶಕ್ತಿಗೆ ರಾಜಕೀಯ ಅಧಿಕಾರ ಸಿಗಬೇಕೆಂಬ ಕಾರಣದಿಂದ ಕ್ಷೇತ್ರದ ಮತದಾರರು ಬೆಂಬಲ ನೀಡಿದ್ದಾರೆ. ಬಿಜೆಪಿ ಈಗಾಗಲೇ 118ಸ್ಥಾನದೊಂದಿಗೆ ಸುಭದ್ರವಾಗಿದೆ. ಅನಿರ್ವಾಯವಾದರೆ ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.