ದೇವನಹಳ್ಳಿ: ‘ಪುರಸಭೆ ವ್ಯಾಪ್ತಿಯ 1200 ಚದರ ಅಡಿಗಿಂತ ಮೇಲ್ಪಟ್ಟ ಮನೆಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ನೋಟಿಸ್ ನೀಡಲಾಗುತ್ತಿದೆ’ ಎಂದು ಪುರಸಭೆ ಕಂದಾಯ ಅಧಿಕಾರಿ ರಾಜೇಂದ್ರ ತಿಳಿಸಿದರು.
ಪ್ರತಿಯೊಂದು ಮನೆಗೂ ನೋಟಿಸ್ ನೀಡಿ ಮಾತನಾಡಿದ ಅವರು ‘ಜಿಲ್ಲಾಧಿಕಾರಿ ಆದೇಶದ ಅನ್ವಯ ನೋಟಿಸ್ ನೀಡಲಾಗುತ್ತಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಯಿಂದ ಅಪಾರ ಜಲಸಂಪತ್ತು ವ್ಯರ್ಥವಾಗುವುದನ್ನು ತಪ್ಪಿಸಲು ಹಾಗೂ ನೀರಿನ ಬವಣೆ ನೀಗಿಸಲು ಇದು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಅಳವಡಿಕೆಗೆ ಮುಂದಾಗಿ ಸಹಕರಿಸಬೇಕು’ ಎಂದರು.
‘ಪ್ರಸ್ತುತ 1,200 ಚದರ ಅಡಿಗಿಂತ ಹೆಚ್ಚಿರುವ 1,236 ಮನೆಗಳನ್ನು ಗುರುತಿಸಲಾಗಿದೆ. ಕೆಲವು ಮನೆಯ ಮಾಲೀಕರು ಸ್ವಯಂಪ್ರೇರಿತರಾಗಿ ಮಳೆ ನೀರು ಸಂಗ್ರಹಿಸುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಹೋಟೆಲ್, ಮಾಲ್, ಲಾಡ್ಜ್, ವಾಣಿಜ್ಯ ಮಳಿಗೆಗಳ ಮಾಲೀಕರು ಮಳೆ ನೀರು ಸಂಗ್ರಹಿಸಬೇಕು. ದೇವಾಲಯಗಳಲ್ಲಿ ಮಳೆ ನೀರು ಸಂಗ್ರಹಿಸುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು. ಇದಕ್ಕೆ ಒಂದು ತಿಂಗಳು ಗಡವು ನೀಡಲಾಗಿದೆ’ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.