ದೇವನಹಳ್ಳಿ: ಮಾನ್ಯವಾದ ವೀಸಾ ಇದ್ದರೂ ವಿಮಾನ ಹತ್ತಲು ನಿರಾಕರಿಸಿದ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ₹ 2.3 ಲಕ್ಷ ಪರಿಹಾರ ನೀಡುವಂತೆ ಗ್ರಾಹಕರ ನ್ಯಾಯಾಲಯವುಬ್ರಿಟಿಷ್ ಏರ್ವೇಸ್ಗೆ ಸೂಚಿಸಿದೆ.
ಬೆಂಗಳೂರಿನ ನಾಗರಬಾವಿ ನಿವಾಸಿ ಧನಲಕ್ಷ್ಮೀ ಎಂಬುವರು 10 ದಿನಗಳ ಯುರೋಪ್ ಪ್ರವಾಸಕ್ಕೆ ಸಿದ್ಧರಾಗಿದ್ದರು. 2019ರ ಏ. 8ರಂದು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಮೂಲಕ ಬಾರ್ಸಿಲೋನಾಗೆ ಬ್ರಿಟಿಷ್ ಏರ್ವೇಸ್ ಮೂಲಕ ಪ್ರಯಾಣಿಸಲು ಸಿದ್ಧರಾಗಿದ್ದರು. ಆದರೆ, ವಿಮಾನ ಹತ್ತುವ ಮುನ್ನ ಕೆಐಎನ ಬ್ರಿಟಿಷ್ ಏರ್ವೇಸ್ ಚೆಕ್ ಇನ್ ಕೌಂಟರ್ನಲ್ಲಿ ನೇರ ಏರ್ಸೈಡ್ ಟ್ರಾನ್ಸಿಟ್ ವೀಸಾ (ಡಿಎಟಿವಿ) ಇಲ್ಲ ಎಂಬ ಕಾರಣ ನೀಡಿ ವಿಮಾನ ಹತ್ತಲು ನಿರಾಕರಿಸಲಾಗಿತ್ತು.
ಹೆಚ್ಚು ಏರ್ಸೈಡ್ ಟ್ರಾನ್ಸಿಟ್ ವೀಸಾ ಹೊಂದಿರುವ ಪ್ರಯಾಣಿಕರು ಲಂಡನ್ ಮೂಲಕ ಯಾವುದೇ ದೇಶಕ್ಕೆ ಪ್ರಯಾಣಿಸಬಹುದು. ಆದರೆ, ಆಸ್ಟ್ರೇಲಿಯಾ ವೀಸಾ ಮತ್ತು ಭಾರತೀಯ ಪಾರ್ಸ್ಪೋರ್ಟ್ ಇದ್ದರೆ ಡಿಎಟಿವಿ ವೀಸಾದ ಅವಶ್ಯಕತೆ ಇರುವುದಿಲ್ಲ.
ಧನಲಕ್ಷ್ಮೀ ಅವರ ಬಳಿ ಆಸ್ಟ್ರೇಲಿಯಾ ವೀಸಾ ಮತ್ತು ಭಾರತೀಯ ಪಾಸ್ಪೋರ್ಟ್ ಇತ್ತು. ಬ್ರಿಟಿಷ್ ಏರ್ವೇಸ್ ಸಿಬ್ಬಂದಿಯ ವರ್ತನೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಅವರು, ಇ–ಮೇಲ್ ಮೂಲಕ ಬ್ರಿಟಿಷ್ ಏರ್ವೇಸ್ಗೆ ದೂರು ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಏರ್ವೇಸ್ ತನ್ನ ಸಿಬ್ಬಂದಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಕ್ಷಮೆ ಕೇಳಿತ್ತು. ಜೊತೆಗೆ, 600 ಯೂರೊಗಳನ್ನು ನೀಡಲು ಮುಂದಾಗಿತ್ತು.
2021ರ ಏಪ್ರಿಲ್ನಲ್ಲಿ ಧನಲಕ್ಷ್ಮೀ ಅವರು ಶಾಂತಿನಗರದಲ್ಲಿ ಇರುವ ಬೆಂಗಳೂರು ಗ್ರಾಮಾಂತರ ಮತ್ತು ನಗರದ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಆ. 20ರಂದು ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯ ಬ್ರಿಟಿಷ್ ಏರ್ವೇಸ್ ಮತ್ತು ಕೆಐಎಯಲ್ಲಿನ ಅದರ ಪ್ರತಿನಿಧಿಗಳು ಜಂಟಿಯಾಗಿ ₹ 2.3 ಲಕ್ಷ ಪಾವತಿಸಬೇಕು ಎಂದು
ಆದೇಶಿಸಿದೆ.
ಇದರಲ್ಲಿ ₹ 1 ಲಕ್ಷ ಹಾನಿ, ₹ 15,000 ಪ್ರಯಾಣಿಕರ ವ್ಯಾಜ್ಯ ವೆಚ್ಚ, ₹ 46 ಸಾವಿರ ಬಡ್ಡಿಯೊಂದಿಗೆ ಟಿಕೆಟ್ ಮರುಪಾವತಿ ಮತ್ತು ₹ 75 ಸಾವಿರ ವಿವಿಧ ಪ್ರವಾಸ ವೆಚ್ಚ ಸೇರಿದೆ. 30 ದಿನದೊಳಗೆ ಈ ಮೊತ್ತ ಪಾವತಿಸುವಂತೆ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.