ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರು 5 ಮಂದಿ ಮಾತ್ರ ಇದ್ದಾರೆ ಹೊರತು 12 ಮಂದಿ ಅಲ್ಲ ಎಂದು ಜಿಲ್ಲಾ ಸೆಷನ್ ನ್ಯಾಯಾಧೀಶ ಶ್ರೀಶಾನಂದ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕೊರೊನಾ ಕುರಿತು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಅವರು, ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ, ಬೈಲನರಸಾಪುರದ ಒಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡಿದೆ. ಮತ್ತೊಂದು ಕೋಡಿಪಾಳ್ಯದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇವನ್ನು ಹೊರತು ಪಡಿಸದರೆ ಬೇರೆಯಾರಿಗೂ ಸೋಂಕು ಹರಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಶೇ 90 ರಷ್ಟು ಮಂದಿ ಗುಣಮುಖರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಗ್ರಾಮಾಂತರ ಜಿಲ್ಲೆಯಲ್ಲಿ ಏ.20ರ ನಂತರ ಲಾಕ್ಡೌನ್ ಸಡಿಲಗೊಳಿಸುವ ಸಾಧ್ಯತೆ ಇದೆ ಎಂದ ಅವರು ಈ ಕುರಿತು ಸರ್ಕಾರವೇ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ನ್ಯಾಯಾಲಯದ ಕಲಾಪ ಸ್ಥಗಿತಗೊಳಿಸಲಾಗಿದೆ. ಈಗಾಗಲೆ ಅತಿಸೂಕ್ಷ್ಮ ಅಪರಾಧ ಪ್ರಕರಣ ಕಲಾಪವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದೆ. ಅಪರಾಧ ಇತ್ಯರ್ಥ ಮತ್ತು ತೀರ್ಪು ಸಂಬಂಧಿಸಿದ ವಿಷಯವನ್ನು ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಪ್ರಸ್ತುತ ಅಂತಹ 6 ಪ್ರಕರಣ ಜಿಲ್ಲೆಯಲ್ಲಿದೆ ಎಂದು ಹೇಳಿದರು.
ಸೆರೆವಾಸದಲ್ಲಿರುವ ಎಲ್ಲ ಕೈದಿಗಳು ಹೆಚ್ಚು ರಕ್ಷಣೆಯಲ್ಲಿದ್ದಾರೆ. ಪ್ರತಿ 8 ತಾಸಿಗೆ ಒಂದು ಬಾರಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮೇ 3ರ ನಂತರ ನ್ಯಾಯಾಲಯದ ಕಲಾಪ ಆರಂಭಗೊಳ್ಳಲಿದೆ. ಎಲ್ಲ ಕಡೆ ಇರುವ 7 ಸಾವಿರ ವಲಸಿಗ ಕಾರ್ಮಿಕರಿಗೆ ಜಿಲ್ಲಾಡಳಿತ ಉತ್ತಮವಾಗಿ ಉಪಹಾರ, ದಿನಸಿ, ಹಾಲು, ಕುಡಿಯುವ ನೀರು, ಶೌಚಾಲಯ, ಔಷಧ ವ್ಯವಸ್ಥೆ ಮಾಡಿದೆ.
ನ್ಯಾಯಾಧಿಶರಾದ ಹರೀಶ್, ದಿಲೀಪ್, ನಟೇಶ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ತಹಶೀಲ್ದಾರ್ ಅಜಿತ್ ಕುಮಾರ್ ರೈ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.