ADVERTISEMENT

ಹಿಂದಿ ದಿವಸಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 7:06 IST
Last Updated 15 ಸೆಪ್ಟೆಂಬರ್ 2020, 7:06 IST
ಹೊಸಕೋಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿಂದಿ ಹೇರಿಕೆ ವಿರೋದಿಸಿ ಕರಾಳ ದಿನಾಚರಣೆ ಆಚರಿಸಿ ತಹಶಿಲ್ದಾರ್‍ ಅವರಿಗೆ ಮನವಿ ಪತ್ರ ನೀಡಲಾಯಿತು.
ಹೊಸಕೋಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿಂದಿ ಹೇರಿಕೆ ವಿರೋದಿಸಿ ಕರಾಳ ದಿನಾಚರಣೆ ಆಚರಿಸಿ ತಹಶಿಲ್ದಾರ್‍ ಅವರಿಗೆ ಮನವಿ ಪತ್ರ ನೀಡಲಾಯಿತು.   

ಹೊಸಕೋಟೆ: ‘ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯು ಒಕ್ಕೂಟ ವ್ಯವಸ್ಥೆಯಾಗಿದ್ದು ಪ್ರಾದೇಶಿಕತೆಯೇ ಜೀವಾಳ ಎಂಬ ಹಿನ್ನಲೆಯಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗೆ ಪ್ರಥಮ ಪ್ರಾಶಸ್ತ್ಯ ಹಾಗೂ ಮನ್ನಣೆ ದೊರೆಯಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬೆಟ್ಟಹಳ್ಳಿ ಗೋಪಿನಾಥ್ ತಿಳಿಸಿದ್ದಾರೆ.

ಅವರು ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿಯನ್ನು ಖಂಡಿಸಿ ನಗರದ ತಾಲ್ಲೂಕು ಕಚೇರಿಯ ಮುಂದೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕರಾಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕನ್ನಡ ಭಾಷೆಗೆ 2 ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದ್ದು ಕನ್ನಡ ಭಾಷೆಗೆ ಪ್ರಥಮ ಪ್ರಾತಿನಿಧ್ಯ ದೊರೆಯುವಂತಾಗಬೇಕು’ ಎಂದರು.

ADVERTISEMENT

‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಭಾಷೆ ಹೆಚ್ಚು ಪ್ರಚಲಿತವಾಗದ ಕಾರಣ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕ್ರಮ ಸೂಕ್ತವಲ್ಲ ಎಂದರು. ಕನ್ನಡಿಗರ ಸಾರ್ವಭೌಮತ್ವವನ್ನು ಕೆರಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದು, ಈ ಆದೇಶವನ್ನು ಮರುಪರಿಶೀಲನೆ ನಡೆಸಿ ಹಿಂದಿ ದಿವಸವನ್ನು ಕರ್ನಾಟಕದಲ್ಲಿ ರದ್ದುಗೊಳಿಸಬೇಕು’ ಎಂದರು.

ಆದೇಶವನ್ನು ತಕ್ಷಣ ವಾಪಸ್ ಪಡೆಯುವಂತೆ ತಹಶೀಲ್ದಾರ್‌ ಮೂಲಕ ಮನವಿ ನೀಡಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ನಟರಾಜ್ ಮಾತನಾಡಿ, ‘ವ್ಯವಹಾರ ದೃಷ್ಟಿಯಿಂದ ಹಿಂದಿ ಭಾಷೆ ಕಲಿಕೆ ಅವಶ್ಯಕವಾಗಿದೆಯೇ ಹೊರತು ಅದನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಕೊಳ್ಳಲು ಸಾದ್ಯವಿಲ್ಲ’ ಎಂದರು.

‘ಶೈಕ್ಷಣಿಕವಾಗಿ ಪ್ರಾದೇಶಿಕ ಭಾಷೆಗಳನ್ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಹೇರುವುದು ಒಳ್ಳೆಯದಲ್ಲ’ ಎಂದರು.

ಜಿಲ್ಲಾ ಕಸಾಪ ಗೌರವಾಧ್ಯಕ್ಷ ಟಿ.ನಾಗರಾಜ್, ಉಪಾಧ್ಯಕ್ಷ ಎಚ್.ಕೆ ಮಂಜುನಾಥ್, ತಾಲ್ಲೂಕು ಕಾರ್ಯಾಧ್ಯಕ್ಷ ಟಿ.ಡಿ.ಎನ್. ಮೂರ್ತಿ, ಕೋಶಾಧ್ಯಕ್ಷ ಶ್ರೀರಾಮಪ್ಪ, ನಗರ ಘಟಕದ ಅಧ್ಯಕ್ಷ ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.