ವಿಜಯಪುರ: ನಗರದಲ್ಲಿರುವ ರಸ್ತೆಗಳನ್ನು ರಿಪೇರಿ ಮಾಡದೆ ಇರುವ ಕಾರಣ ಓಡಾಡಲಿಕ್ಕೂ ಸಾದ್ಯವಾಗಂತೆ ಆಗಿವೆ ಈ ಬಗ್ಗೆ ಪುರಸಭೆಯವರು ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನಯ್ಯ ಒತ್ತಾಯಿಸಿದ್ದಾರೆ.
ಇಲ್ಲಿನ 18 ನೇ ವಾರ್ಡಿನಿಂದ 23 ನೇ ವಾರ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೋಲಾರ ಮುಖ್ಯ ರಸ್ತೆಯಿಂದ ಆರಂಭಗೊಂಡು 23 ನೇ ವಾರ್ಡ್ ರಹಮತ್ ನಗರದವರೆಗೂ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯುದ್ದಕ್ಕೂ ಹಳ್ಳಗಳು ಬಿದ್ದಿವೆ. ಮಳೆ ಬಂದರೆ ಓಡಾಡಲಿಕ್ಕೂ ಸಾಧ್ಯವಾಗುತ್ತಿಲ್ಲ. ಶಾಸಕರು, ಪುರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಮನವಿಗಳನ್ನು ಮಾಡಿ ಸಾಕಾಗಿದೆ. ನಗರೋತ್ಥಾನದಡಿಯಲ್ಲಿ ಅನುದಾನ ಕೊಟ್ಟು ರಸ್ತೆಗೆ ಡಾಂಬರೀಕರಣ ಮಾಡಿಕೊಡುವುದಾಗಿ ಆಶ್ವಾಸನೆಗಳನ್ನೂ ಕೊಟ್ಟಿದ್ದರು. ಇದುವರೆಗೂ ರಸ್ತೆ ಅಭಿವೃದ್ಧಿ ಮಾಡಿಲ್ಲ ಎಂದಿದ್ದಾರೆ.
ಸ್ಥಳೀಯ ನಿವಾಸಿ ಷಫಿವುಲ್ಲಾ ಮಾತನಾಡಿ, ದ್ವಿಚಕ್ರ ವಾಹನಗಳಲ್ಲಿ ಓಡಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಆಂಬುಲೆನ್ಸ್ ಬರಲಿಕ್ಕೆ ಸಾಧ್ಯವಾಗಲ್ಲ. ರೋಗಿಯನ್ನು ಕೋಲಾರದ ಮುಖ್ಯ ರಸ್ತೆ, ಇಲ್ಲವೇ ಬೈಪಾಸ್ ರಸ್ತೆಗೆ ದ್ವಿ ಚಕ್ರ ವಾಹನಗಳಲ್ಲಿ ಕರೆದುಕೊಂಡು ಬಂದು ಆಂಬುಲೆನ್ಸ್ಗೆ ಹತ್ತಿಸಬೇಕಾಗಿರುವಂತಹ ದುಸ್ಥಿತಿ ಬಂದಿದೆ ಎಂದು ದೂರಿದ್ದಾರೆ.
ಇಲ್ಲಿನ ರಾಘವಪ್ಪ ಬಡಾವಣೆಯ ಸಮೀಪದಲ್ಲೂ ರಸ್ತೆಯು ತೀರಾ ಕಿರಿದಾಗಿರುವುದರ ಜೊತೆಗೆ ಹದಗೆಟ್ಟಿದೆ. ಇಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಿಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ನಗರದಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ, ನೀರಿನ ಪೂರೈಕೆಯ ಕಡೆಗೆ ಗಮನ ಹರಿಸಿದ್ದೇವೆ. 23 ನೇ ವಾರ್ಡಿನಲ್ಲಿ ಈಗಾಗಲೇ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಗಳ ಅಭಿವೃದ್ಧಿಯ ಕುರಿತು ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ತಡವಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.