ದೊಡ್ಡಬಳ್ಳಾಪುರ: ಬಹುತ್ವ ಸಂಸ್ಖರತಿ ಭಾರತದ ಅಂತಃಸತ್ವ ಮತ್ತು ಅಸ್ಮಿತೆ. ಬಹುತ್ವ ಬಿಟ್ಟು ಭಾರತವನ್ನು ಊಹಿಸಿಕೊಳ್ಳಲು ಆಗದು ಎಂದು ಸಾಹಿತಿ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬೆಂಗಳೂರಿನ ಆಕೃತಿ ಪುಸ್ತಕ ಸಹಯೋಗದಲ್ಲಿ ಬಹುತ್ವ ಕರ್ನಾಟಕ ಲೇಖಕರೊಂದಿಗೆ ಭಾನುವಾರ ನಗರದ ಆರ್.ಡಿ.ಕನ್ವೆನ್ಷನ್ ಹಾಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದೇ ಸಂಸ್ಕೃತಿ ಹೇರುವ ಪ್ರಯತ್ನ ನಡೆಯುತ್ತಿರುವ ಆತಂಕದ ಈ ಕಾಲಘಟ್ಟದಲ್ಲಿ ಬಹುತ್ವದ ಅಗತ್ಯ ಇದೆ. ಹಲವು ಭಾಷೆ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ ಹೊಂದಿರುವ ಭಾರತಕ್ಕೆ ಬಹುತ್ವ ಅಗತ್ಯ ಮತ್ತು ಅನಿವಾರ್ಯ ಕೂಡ ಎಂದರು.
ಸಾಹಿತಿ ಡಾ.ರಹಮತ್ ತರೀಕೆರೆ
ಸಂಸ್ಕೃತಿ,ಪರಂಪರೆ ದೊರೆಯುವ ಬಹುತ್ವದ ಅರಿವನ್ನು ಶೋಧಿಸಬೇಕಾಗಿದೆ. ಬಹುತ್ವಕ್ಕಾಗಿ ನಾಗರಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು. ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಹೇಳುವ ಸ್ವಾತಂತ್ರ್ಯ,ಸಮಾನತೆ ಮತ್ತು ಬಂಧುತ್ವ ಇವುಗಳನ್ನು ಬಹುತ್ವದ ಮೌಲ್ಯವಾಗಿ ರೂಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಾರತವು ವೈವಿಧ್ಯಮಯತೆಯಿಂದ ಕೂಡಿದೆ. ವೈವಿಧ್ಯತೆಯೇ ಬಹುತ್ವವಲ್ಲ,ಸಮಾನ ಅವಕಾಶಗಳೇ ಬಹುತ್ವ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಒಂದೇ ಸಂಸ್ಕೃತಿ, ನಾಯಕತ್ವ, ಧರ್ಮವನ್ನು ಹೇರುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ಇರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗುತ್ತದೆ ಎಂದು ತರೀಕೆರೆ ಹೇಳಿದರು.
ಬಹುತ್ವದಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ. ಮನುಷ್ಯಪರವಾದ ಬಹುತ್ವ ಉಳಿದರೆ ಮನುಷ್ಯ ಉಳಿಯುತ್ತಾನೆ. ಕೋಮುವಾದ ಮತ್ತು ಮತೀಯವಾದದ ಸಂಘರ್ಷಕ್ಕೆ ಅನುಮಾನ ಕಾರಣವಾಗುತ್ತದೆ. ಅನುಮಾನ ದ್ವೇಷವಾಗಿ, ಹಿಂಸೆ ರೂಪತಾಳಿ ವಿನಾಶದ ಕಡೆಗೆ ದೂಡುತ್ತದೆ ಎಂದು ಸಾಹಿತಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಅಭಿಪ್ರಾಯಪಟ್ಟರು.
ಪ್ರಭುತ್ವ ಮತ್ತು ಜನತೆ ಎರಡು ಕಡೆಯಿಂದಲೂ ಬಹುತ್ವ ಸಾಧಿಸಬೇಕಾಗಿದೆ. ಪ್ರಜಾಪ್ರಭುತ್ವ ಆಶಯದೊಂದಿಗೆ ಬಹುತ್ವ ಒಂದಾಗಬೇಕು. ಬಹುತ್ವ ಜೀವನ ಕ್ರಮ ಆಗಬೇಕು ಎಂದು ವಿಮರ್ಶಕ ಡಾ.ಕಂಟನುಕುಂಟೆ ರಂಗನಾಥ ಹೇಳಿದರು.
ಯಾವುದೇ ಧರ್ಮದಲ್ಲಿ ಏಕರೂಪತೆ ತರಲು ಸಾಧ್ಯವಿಲ್ಲ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವುದು ಸರಿಯಲ್ಲ ಎಂದು ವಿಮರ್ಶಕ ಡಾ.ರವಿಕುಮಾರ್ ನೀಹ ಹೇಳಿದರು.
ಡಾ. ತರೀಕೆರೆ ಅವರೊಂದಿಗೆ ನಡೆದ ಸಂವಾದದಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗದ ಡಾ.ಪ್ರಕಾಶ್ ಮಂಟೆದ, ಹೇಮಂತ್ ಲಿಂಗಪ್ಪ, ಉಪನ್ಯಾಸಕರಾದ ವನಿತಾ, ಪ್ರಸನ್ನಲಕ್ಷ್ಮೀಪುರ, ಎಚ್.ಎನ್.ರೇಣುಕಾರಾಧ್ಯ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕೋಮುಸೌಹಾರ್ದತೆಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಹುತ್ವದ ಅಗತ್ಯವಿದೆ
- ಡಾ.ನೆಲ್ಲುಕುಂಟೆ ವೆಂಕಟೇಶಯ್ಯ
ಭಾರತದ ಆರ್ಥಿಕ ಹಿಡಿತ ಶೇ10 ರಷ್ಟು ಜನರಲ್ಲಿದೆ ಎಂಬುದು ಅಸಮಾನತೆಯ ಪ್ರತೀಕ
- ಡಾ.ರಹಮತ್ ತರೀಕೆರೆ
Quote - ಏಕರೂಪದ ಸಂಸ್ಕೃತಿ ಹೇರಲು ಹೊರಟಿರುವ ಈ ಕಾಲಘಟ್ಟದಲ್ಲಿ ಬಹುತ್ವಕ್ಕಿರುವ ಅಪಾಯಗಳನ್ನು ಎಲ್ಲರೂ ಅರಿಯಬೇಕಿದೆ ಡಾ.ಕಂಟನುಕುಂಟೆ ರಂಗನಾಥ
Quote - ಬಹುತ್ವದ ಮೇಲೆ ಏಕ ಸಂಸ್ಕೃತಿಯ ಸಿದ್ಧಾಂತ ಹೇರುವುದು ಅಪಾಯಕಾರಿ ಬೆಳವಣಿಗೆ ಡಾ.ರವಿಕುಮಾರ್ ನೀಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.