ADVERTISEMENT

ಅವ್ಯವಸ್ಥೆ: ಬಸ್‌ ತಡೆದು ಪ್ರತಿಭಟನೆ

ಬೆಂಗಳೂರಿಗೆ ಪ್ರತಿದಿನ ಪ್ರಯಾಣಿಸುವವರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 15:20 IST
Last Updated 19 ಮಾರ್ಚ್ 2020, 15:20 IST
ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಪ್ರಯಾಣಿಕರು
ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಪ್ರಯಾಣಿಕರು   

ದೊಡ್ಡಬಳ್ಳಾಪುರ: ಕೋವಿಡ್‌ -19 ವೈರಸ್‌ ಹಾವಳಿಯಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಇನ್ನೊಂದೆಡೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಅವ್ಯವಸ್ಥೆ ಖಂಡಿಸಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಯಾವುದೇ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರಗೆ ಹೋಗದಂತೆ ಸ್ಥಳೀಯರು ತಡೆದು ಪ್ರತಿಭಟನೆ ನಡೆಸಿದರು.

ಹಲವು ಬಾರಿ ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕರಿಂದ ಜಿಲ್ಲಾ ಹಾಗೂ ವೀಭಾಗಿಯ ಹಂತದ ಅಧಿಕಾರಿಗಳವರೆಗೂ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಗಿದೆ. ಯಾರೊಬ್ಬರು ಸಮಸ್ಯೆ ಬಗೆಹರಿಸಿಲ್ಲ ಎಂದು ಬೆಂಗಳೂರಿನ ವಿವಿಧ ಕಂಪನಿಗಳಿಗೆ ಉದ್ಯೋಗಕ್ಕೆ ಹೋಗುವ ಸ್ಥಳೀಯರಾದ ಮಂಜುನಾಥ್‌ನಾಗ್‌, ಸಂಪತ್, ಪ್ರವೀಣ್, ವಿನೋದ್ ದೂರಿದರು.

ದೊಡ್ಡಬಳ್ಳಾಪುರ ಡಿಪೊದಲ್ಲಿ ಇರುವ ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು ಗುಜರಿಗೆ ಸೇರುವ ಸ್ಥಿತಿಯಲ್ಲಿ ಇವೆ. ಬಸ್‌ ಬೆಂಗಳೂರು ತಲುಪುವವರೆಗೂ ಎಲ್ಲಿ ಕೆಟ್ಟು ನಿಲ್ಲುತ್ತದೆ ಎನ್ನುವ ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾಗಿದೆ. ಬಸ್‌ ನಿರ್ವಾಹಕರು, ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ನಾವೆಲ್ಲರೂ ಬಿಟ್ಟಿಯಾಗಿ ಪ್ರಯಾಣಿಸುತಿದ್ದೇವೆ ಎನ್ನುವ ರೀತಿಯಲ್ಲಿಯೇ ಮಾತನಾಡುತ್ತಾರೆ. ಈ ವ್ಯವಸ್ಥೆ ಸರಿಯಾಗುವವರೆಗೂ ಬಸ್‌ಗಳನ್ನು ಬಿಡದಂತೆ ತಡೆದು ನಿಲ್ಲಿಸಲಾಗಿದೆ ಎಂದರು.

ADVERTISEMENT

ಪೊಲೀಸರ ಭರವಸೆ: ದ್ವಿತೀಯ ಪಿಯು ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗಲಿದೆ ಎನ್ನುವ ಕಾರಣದಿಂದ ಬಸ್‌ಗಳನ್ನು ಡಿಪೊದಿಂದ ಹೊರ ಹೋಗಲು ಅವಕಾಶ ನೀಡುವಂತೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕರೆಸಿ ಇಲ್ಲಿನ ಸಮಸ್ಯೆಗಳ ಕುರಿತು ಸಭೆ ನಡೆಸುವ ಬಗ್ಗೆ ಸಬ್‌ಇನ್‌ಸ್ಪೆಕ್ಟರ್‌ ನೀಡಿದ ಭರವಸೆಯಂತೆ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ. ಭಾನುವಾರದೊಳಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಬಸ್‌ಗಳನ್ನು ತಡೆಯಲಾಗುವುದು ಎಂದು ರಘುನಂದನ್, ಚಂದ್ರು, ಮುನಿರಾಜು,ರಘು, ವಿಲ್ಸೊನ್ ಬಾಬು,ರವಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.