ದೊಡ್ಡಬಳ್ಳಾಪುರ:ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಲುವಾಗಿ ಸೋಮವಾರ ಮುಸ್ಲಿಂ ನಾಗರಿಕ ಸಮಾಜದ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಾಂತಿನಗರದ ದರ್ಗಾದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಉಪನ್ಯಾಸಕ ರವೂಫ್, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನಗರ ಅಧ್ಯಕ್ಷ ಬಷೀರ್, ಮುಸ್ಲಿಂ ಮುಖಂಡರಾದ ತೂಬಗೆರೆ ಷರೀಫ್, ಆಜನ್ ಬಾಬಾ ಮಾತನಾಡಿ, ದೇಶದ ಮೇಲೆ ಯಾವುದೇ ಆಕ್ರಮಣ ಮಾಡಿದರೂ ಸಹಿಸಲಾಗುವುದಿಲ್ಲ. ಪಾಕಿಸ್ತಾನದ ಕೃತ್ಯವನ್ನು ಬೆಂಬಲಿಸಿ ಜೈಕಾರ ಹಾಕುವ ಯಾವುದೇ ಸಮುದಾಯದವನ್ನು ಖಂಡಿಸಬೇಕು. ದೇಶ ಕಾಯುತ್ತಿರುವ ಯೋಧರಿಗೆ ಗೌರವ ಸಲ್ಲಿಸಬೇಕಿರುವುದು ಎಲ್ಲ ಭಾರತೀಯರ ಕರ್ತವ್ಯ ಎಂದರು.
ಉಗ್ರ ಸಂಘಟನೆಗಳನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕು. ಗಡಿಯಲ್ಲಿ ನಿರಂತರವಾಗಿ ಉಗ್ರ ಚಟುವಟಿಕೆ ನಡೆಸುತ್ತಿರುವ ಭಯೋತ್ಪಾದಕರನ್ನು ಧ್ವಂಸ ಮಾಡಬೇಕು. ಕಾಶ್ಮೀರಕ್ಕೆ ಪ್ರತ್ಯೇಕವಾಗಿ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.