ದೊಡ್ಡಬಳ್ಳಾಪುರ: ಇಂದು ಯೋಗಿ ನಾರೇಯಣ ಯತೀಂದ್ರರ 297ನೇ ಜಯಂತಿ. ಆದರೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸದೆ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ಆಡಳಿತದ ವಿರುದ್ಧ ಬಲಿಜ ಸಮುದಾಯದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಆಡಳಿತ ಸರ್ಕಾರದ ಆದೇಶ ಉಲ್ಲಂಘಿಸಿ ಬಲಿಜ ಸಮುದಾಯವನ್ನು ಕಡೆಗಣಿಸುತ್ತಿದೆ. ಯೋಗಿ ನಾರೇಯಣ ಯತೀಂದ್ರರ ಜಯಂತಿ ಆಚರಣೆ ಕುರಿತಂತೆ ಪೂರ್ವ ಭಾವಿ ಸಭೆ ನಡೆಸಿಲ್ಲ. ಕಾಟಾಚಾರಕ್ಕೆ ಸೋಮವಾರ ಸಂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದರು.
ಇಷ್ಟಾದರೂ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ತಾಲ್ಲೂಕು ಕಚೇರಿಗೆ ಬಂದರೆ ಯಾವುದೇ ಅಧಿಕಾರಿಗಳು ಹಾಜರಿರಲಿಲ್ಲ. ಅಧಿಕಾರಿಗಳು ಪದೇ ಪದೇ ಇದೇ ರೀತಿ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಆರೋಪಿಸಿದರು.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಟಿ. ವೆಂಕಟರಮಣಯ್ಯ ಅವರಿಗೆ ದೂರು ಸಲ್ಲಿಸಿದ ಮುಖಂಡರು, ತಾಲ್ಲೂಕು ಆಡಳಿತದ ವರ್ತನೆ ವಿರುದ್ಧ ಕಿಡಿಕಾರಿದರು. ಶ್ರೀಯೋಗಿ ನಾರೇಯಣ ಬಲಿಜ ಸಂಘದ ತಾಲ್ಲೂಕು ಅಧ್ಯಕ್ಷ ಬಳೆರಾಮಮೂರ್ತಿ, ಯುವ ಬಲಿಜ ಸಂಘದ ಅಧ್ಯಕ್ಷ ಎನ್. ಶ್ರೀನಾಥ್, ಮುಖಂಡರಾದ ಡಾ.ರಾಮಚಂದ್ರಪ್ಪ, ಹಮಾಮ್ ತಿಮ್ಮರಾಜ್, ಜವಾಜಿ ಸೀತಾರಾಮಯ್ಯ, ಹಮಾಮ್ ವೆಂಕಟೇಶ್, ಸುಬ್ರಮಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.