ADVERTISEMENT

ಅನಧಿಕೃತವಾಗಿ ರಸ್ತೆ ಕಾಮಗಾರಿ ಶಿಷ್ಟಾಚಾರ ಉಲ್ಲಂಘನೆ: ಶಾಸಕ ಶರತ್ ಬಚ್ಚೇಗೌಡ

ಕೋಡಿಹಳ್ಳಿಯಲ್ಲಿ ಮಾಹಿತಿ ನೀಡದೆ ರಸ್ತೆ ಕಾಮಗಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 2:24 IST
Last Updated 9 ಸೆಪ್ಟೆಂಬರ್ 2020, 2:24 IST
ಹೊಸಕೋಟೆ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಶಾಸಕ ಶರತ್ ಬಚ್ಚೇಗೌಡ ರಸ್ತೆಯನ್ನು ವೀಕ್ಷಿಸಿದರು
ಹೊಸಕೋಟೆ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಶಾಸಕ ಶರತ್ ಬಚ್ಚೇಗೌಡ ರಸ್ತೆಯನ್ನು ವೀಕ್ಷಿಸಿದರು   

ಹೊಸಕೋಟೆ: ‘ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ರಸ್ತೆ ಕಾಮಗಾರಿ ಮಾಡುತ್ತಿದ್ದು ಅದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.

ಕೋಡಿಹಳ್ಳಿಯಲ್ಲಿ ಮಾತನಾಡಿದ ಅವರು, ‘ಊರಿನಲ್ಲಿ ಇತ್ತೀಚೆಗಷ್ಟೇ ನಿರ್ಮಾಣ ಮಾಡಿದ್ದ ಹಾಗೂ ಉತ್ತಮವಾಗಿದ್ದ ರಸ್ತೆಯನ್ನು ಅನಾವಶ್ಯಕವಾಗಿ ಕಿತ್ತು ಅದಕ್ಕೆ ಮತ್ತೆ ಕಾಂಕ್ರೀಟ್‌ ಹಾಕುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ. ಇದು ಕಾನೂನು ಬಾಹಿರ ಕೆಲಸ. ಈ ಕಾಮಗಾರಿಗೆ ಯಾವುದೇ ಇಲಾಖೆಯಿಂದ ಅನುದಾನ ಬಂದಿಲ್ಲ. ಯಾವುದೇ ಕೆಲಸದ ಆದೇಶವಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗೂ ಈ ವಿಷಯದ ಬಗ್ಗೆ ಮಾಹಿತಿಯಿಲ್ಲ. ಅದಕ್ಕೂ ಮಿಗಿಲಾಗಿ ಸ್ಥಳೀಯ ಶಾಸಕನಾಗಿ ತಮ್ಮ ಗಮನಕ್ಕೂ ಇದು ಬಂದಿಲ್ಲ’ ಎಂದರು.

‘ಈ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರ ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಾರಾದರೂ ಅದರ ಬಗ್ಗೆ ಯಾವುದೇ ದಾಖಲೆಯಿಲ್ಲ. ಹಾಗೂ ಆ ಆದೇಶದಲ್ಲಿ ಇಂತಹ ರಸ್ತೆಯ ಕೆಲಸವೆಂದು ಉಲ್ಲೇಖ ಇಲ್ಲವಾದ್ದರಿಂದ ಇದು ಅನಧಿಕೃತ’ ಎಂದರು.

ADVERTISEMENT

‘ಆದರೂ ಕೆಲವು ಜನರ ಹಿತಾಸಕ್ತಿಗೆ ಪೊಲೀಸ್ ಇಲಾಖೆ ಬಲಿಯಾಗಿದೆ. ಪೊಲೀಸರು ಗುತ್ತಿಗೆದಾರನ ಬಂಟರಂತೆ ಕೆಲಸ ಮಾಡುತ್ತಿದ್ದು ಖುದ್ದಾಗಿ ಸರ್ಕಲ್ ಇನ್‌ಸ್ಪೆಕ್ಟರ್‌ ಅವರೇ ನಿಂತು ಅವರಿಗೆ ಸಹಕಾರ ನೀಡುತ್ತಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯ’ ಎಂದರು.

‘ಮುಂದಿನ ದಿನಗಳಲ್ಲಿ ಬರುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ರಾಜಕೀಯ ಮಾಡುತ್ತಿದ್ದು ಇದರ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತನಾಡುವುದಾಗಿ ತಿಳಿಸಿದರು. ಪೊಲೀಸ್ ಇಲಾಖೆಗೆ ಯಾರೂ ಲಿಖಿತವಾಗಿ ದೂರು ನೀಡದಿದ್ದರೂ ಅವರೇ ಖುದ್ದಾಗಿ ಬಂದು ಇಂತಹ ಕೆಲಸಕ್ಕೆ ಭದ್ರತೆ ನೀಡುತ್ತಿದ್ದಾರೆ’ ಎಂದರು.

ಸ್ಥಳದಲ್ಲಿ ಹಾಜರಿದ್ದ ಡಿವೈಎಸ್‌ಪಿ ನಿಂಗಪ್ಪ ಸಕ್ರಿ ಮಾತನಾಡಿ, ‘ನಾವು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಊರಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಬಂದಿದ್ದು ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು’ ಎಂದರು.

ಸ್ಥಳೀಯ ಮುಖಂಡ ಜನಾರ್ದನ್ ಮಾತನಾಡಿ, ಈ ಕೆಲಸವು ಕಾನೂನು ಬದ್ಧವಾಗಿದ್ದು ಇದನ್ನು ಊರಿನ ಅಭಿವೃದ್ಧಿಗಾಗಿ ಮಾಡುತ್ತಿದ್ದೇವೆ. ಯಾವುದೇ ಇಲಾಖೆಯ ಅನುದಾನವಿಲ್ಲದಿದ್ದರೆ ತಾವೇ ವೈಯಕ್ತಿಕವಾಗಿ ಕಾಮಗಾರಿಯನ್ನು ಪೂರ್ತಿ ಮಾಡುವುದಾಗಿ ತಿಳಿಸಿದರು.

ಊರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತಾದರೂ ಪೊಲೀಸರ ಮಧ್ಯಪ್ರವೇಶದಿಂದ ಘರ್ಷಣೆಗೆ ಅವಕಾಶವಾಗಲಿಲ್ಲ.

ಮುಖಂಡರಾದ ಬೈರೇಗೌಡ, ಕೋಡಿಹಳ್ಳಿ ಸುರೇಶ್, ಜಿಲ್ಲಾ ಪಂಚಾ ಯಿತಿ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಸ್.ಎಂ. ಮಂಜುನಾಥ್ ಭಾಗವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.