ADVERTISEMENT

ರಂಗಕಲಾವಿದರಿಗೆ ಶಾಶ್ವತ ಪರಿಹಾರ ಒದಗಿಸಿ

ವಿಜಯಪುರ : 57ನೇ ಮಾಸದ ’ಕನ್ನಡದೀಪ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:12 IST
Last Updated 8 ಆಗಸ್ಟ್ 2019, 13:12 IST
ವಿಜಯಪುರದ ಕನ್ನಡ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ನಿರ್ಮಾಪಕ ಮುನೇಗೌಡ ಅವರನ್ನು ಸನ್ಮಾನಿಸಲಾಯಿತು
ವಿಜಯಪುರದ ಕನ್ನಡ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ನಿರ್ಮಾಪಕ ಮುನೇಗೌಡ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ: ಒಡಲಿನಲ್ಲಿ ಅಪಾರ ನೋವು ತುಂಬಿಕೊಂಡಿದ್ದರೂ ಮುಖದಲ್ಲಿ ಮಂದಹಾಸ ‍ಬೀರುವ ಪ್ರವೃತ್ತಿ ಬೆಳೆಸಿಕೊಂಡಿರುವ ರಂಗ ಕಲಾವಿದರ ಬದುಕಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ ಎಂದು ನಿರ್ಮಾಪಕ ಮಂಡಿಬೆಲೆ ಮುನೇಗೌಡ ಸರ್ಕಾರಕ್ಕೆ ಒತ್ತಾಯಿಸಿದರು.

ಇಲ್ಲಿನ ಸಂತೆಬೀದಿಯಲ್ಲಿರುವ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ 57ನೇ ಮಾಸದ ’ಕನ್ನಡದೀಪ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಕಷ್ಟ, ಸುಖ ಸಹಜ. ಕಷ್ಟ ಪರಿಹಾರವಾದ ಮೇಲೆ ಸುಖ ಬರುವುದು ಸಹಜ. ಆದರೆ, ರಂಗಕಲಾವಿದರ ಇಡೀ ಜೀವನ ಕಷ್ಟಗಳ ಸರಮಾಲೆ. ಸಾಮಾಜಿಕ ಜಾಲತಾಣಗಳು, ಧಾರಾವಾಹಿಗಳ ಪ್ರಭಾವಕ್ಕೆ ಪೌರಾಣಿಕ ನಾಟಕ, ಹರಿಕಥೆ, ಭಜನೆ, ಜಾನಪದ ಸಂಸ್ಕೃತಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಸ್ತುಗಳಂತೆ ಆಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರೂ ಕಲಾವಿದರ ನೆರವಿಗಾಗಿ ಏನನ್ನೂ ಮಾಡುತ್ತಿಲ್ಲ. ಬಹಳಷ್ಟು ಮಂದಿ ಕಲಾವಿದರು ಕಲೆ ಮೇಲಿನ ವ್ಯಾಮೋಹದಿಂದ ಎಲ್ಲ ಸಂಪತ್ತು ಮಾರಿಕೊಂಡು ನಿರ್ಗತಿಕರಾಗಿದ್ದಾರೆ. ಕಲಾವಿದ ಎನ್.ರಾಜಗೋಪಾಲ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.

ಸಾಹಿತಿ ಡಾ.ವಿ.ಎನ್.ರಮೇಶ್ ಮಾತನಾಡಿ, ‌ಹಿರಿಯ ಕಲಾವಿದರ ಬದುಕು ಅಕ್ಷರಶ ಬೀದಿಗೆ ಬಂದಿದೆ. ಅವರ ಮಕ್ಕಳು, ವಿದ್ಯಾಭ್ಯಾಸದಿಂದ ವಂಚಿತರಾಗಿ ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕಲಾವಿದರೂ ಕೂಡ ಸಂಪಾದನೆ ಇಲ್ಲದೆ ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎಂದು ನೊಂದು ನುಡಿದರು.

ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್ ಮಾತನಾಡಿ, ಮಾಹಿತಿ ತಂತ್ರಜ್ಞಾನಯುಗ ಆರಂಭವಾದ ಮೇಲೆ ಯುವಜನರು ಸಂಸ್ಕಾರ, ಉತ್ತಮ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಕೌಟುಂಬಿಕ ಸಂಬಂಧಗಳ ಕುರಿತು ಮಾಹಿತಿ ಇಲ್ಲ. ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ನಿರ್ಮಾಪಕ ಮಂಡಿಬೆಲೆ ಮುನೇಗೌಡ ಅವರನ್ನು ಸನ್ಮಾನಿಸಲಾಯಿತು. ಎಂ.ವಿ.ನಾಯ್ಡು ತಂಡದಿಂದ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಕೋರಮಂಗಲ ಭೈರೇಗೌಡ, ಮುಖಂಡರಾದ ಕನಕರಾಜು, ಜಿ.ಎಂ.ಚಂದ್ರು, ಬೂದಿಗೆರೆ ಶ್ರೀನಿವಾಸ್, ವೆಂಕಟೇಶ್, ಲಕ್ಷ್ಮೀಪತಿ, ಮಹಾತ್ಮಾಂಜನೇಯ, ಕಲಾವಿದರ ಸಂಘದ ಕಾರ್ಯದರ್ಶಿ ಗೋವಿಂದರಾಜು, ನಾಗಯ್ಯ, ಗಾಯಕ ನರಸಿಂಹಪ್ಪ, ಮಹೇಶ್‌ಕುಮಾರ್, ವೆಲ್ಡರ್‌ಮುನಿಮಾರಪ್ಪ, ತಿಮ್ಮರಾಯಬಾಬು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.