
ದೊಡ್ಡಬಳ್ಳಾಪುರ: ಬೆಂಬಲ ಯೋಜನೆಯಡಿ ರಾಗಿ ಖರೀದಿ ಹಾಗೂ ನೋಂದಣಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ರೈತರ ನೋಂದಣಿ ಮುಕ್ತಾಯವಾಗಿರುವದರಿಂದ ರಾಗಿ ಬೆಳೆದಿರುವ ರೈತರಿಗೆ ಅನಾನುಕೂಲವಾಗಲಿದೆ. ಕೂಡಲೇ ಸರ್ಕಾರ ರಾಗಿ ಖರೀದಿ ನೋಂದಣಿ ದಿನಾಂಕವನ್ನು ವಿಸ್ತರಿಸಬೇಕು ಹಾಗೂ ಇದಕ್ಕೆ ಪೂರಕವಾಗಿ ರಾಗಿ ಖರೀದಿ ಗುರಿಯನ್ನು ಹೆಚ್ಚಳ ಮಾಡಬೇಕೆಂದು ಪ್ರತಿಭಟನನಿರತರು ಆಗ್ರಹಿಸಿದರು.
ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಕನಿಷ್ಠ ಬೆಲೆ ಯೋಜನೆಯಡಿಯಲ್ಲಿ ಕೆಲವು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಿತಿ ಹಾಗೂ ದಿನಾಂಕದ ನೆಪದಲ್ಲಿ ತಡೆಯೊಡ್ಡುವುದು ಸರಿಯಲ್ಲ. ತಾಲ್ಲೂಕಿನಲ್ಲಿ ಮಳೆ ಕಾರಣದಿಂದಾಗಿ ರಾಗಿ ಕೊಯ್ಲಿನಲ್ಲಿ ರೈತರು ತೊಂಡಗಿಸಿಕೊಂಡಿದ್ದರಿಂದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆ ನಿಧಾನವಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಹೇಳಿದರು.
ಪೂರ್ಣ ಪ್ರಮಾಣದ ರೈತರ ನೋಂದಣಿ ಕಾರ್ಯವು ಇನ್ನು ಸಾಕಷ್ಟು ಪ್ರಮಾಣದಲ್ಲಿ ಇದ್ದು ಅಂತ ರೈತರು ಈ ಯೋಜನೆ ಅಡಿಯಲ್ಲಿ ಅನುಕೂಲ ಪಡೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಗಿ ಖರೀದಿ ನೋಂದಣಿ ದಿನಾಂಕವನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕು ಅಥವಾ ಒಂದು ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡಲು ವ್ಯವಸ್ಥೆ ಮಾಡಬೇಕು ಎಂದರು.
ರಾಗಿ ಖರೀದಿ ನೋಂದಣಿಗೆ ಕೊನೆಯ ದಿನಾಂಕ ತಿಳಿಸದೆ ಕೆಲವೇ ದಿನಗಳು ಇದ್ದಾಗ ಏಕಾಏಕಿ ನಿಲ್ಲಿಸಲಾಗಿದೆ. ಕೊನೆಯ ದಿನಾಂಕದಂದು ಮಧ್ಯಾಹ್ನ 12 ಗಂಟೆಗೆ ಬಂದ್ ಆಗಿದೆ. ಇನ್ನು ತಾಲ್ಲೂಕಿನಲ್ಲಿ ಸಾವಿರಾರು ರೈತರು ನೋಂದಣಿ ಮಾಡಿಸುವವರಿದ್ದಾರೆ. ರಾಗಿ ಧಾನ್ಯಕ್ಕೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಸರ್ಕಾರ ರೈತರಿಂದ ರಾಗಿ ಖರೀದಿ ಮಾಡಿ, ಶೇಖರಣೆಗೆ ಆಧುನಿಕ ತಂತ್ರಜ್ಞಾನ ಬಳಸಿ ರೈತರಿಗೆ ನೆರವಾಗಬೇಕಿದೆ ಎಂದು ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸತೀಶ್ ಹೇಳಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಕೇಶವ ಮೂರ್ತಿ, ಮಿನಿಶಾಮಪ್ಪ, ಮಹದೇವ್, ದೇವನಹಳ್ಳಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ ಇದ್ದರು.
ಬೆಳಗಾವಿ ಅಧಿವೇಶನ ಬಳಿಕ ಸೂಕ್ತ ನಿರ್ಧಾರ
ರಾಜ್ಯದಲ್ಲಿ 60 ಲಕ್ಷ ಕ್ವಿಂಟಲ್ ರಾಗಿ ಖರೀದಿ ಗುರಿ ಹೊಂದಲಾಗಿದ್ದು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 12687 ರೈತರಿಂದ 240106 ಕ್ವಿಂಟಲ್ ನೋಂದಣಿಯಾಗಿದ್ದು ಕಳೆದ ಸಾಲಿಗಿಂತ 60 ಸಾವಿರ ಕ್ವಿಂಟಲ್ ಹೆಚ್ಚಾಗಿದೆ. ರೈತರು ರಾಗಿ ಖರೀದಿ ದಿನಾಂಕ ವಿಸ್ತರಿಸಲು ಹಾಗೂ ಖರೀದಿ ಗುರಿಯ ಮಿತಿ ಹೆಚ್ಚಿಸುವ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಿಗಮದ ಕೇಂದ್ರ ಕಚೇರಿಗೂ ವರದಿ ಕಳುಹಿಸಿದ್ದೇವೆ. ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುವ ವಿಚಾರವಾಗಿದ್ದು ಬೆಳಗಾವಿ ಅಧಿವೇಶನ ಮುಗಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರವೀಣ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.