ದಾಬಸ್ ಪೇಟೆ: ಹಲವು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆಯಿಂದ ಸೋಂಪುರ ಹೋಬಳಿಯ ರೈತರ ಮೊಗದಲ್ಲಿ ಬೇಸರ ಮೂಡಿದೆ.
ಮುಂಗಾರು ಮಳೆಗೆ ಹೋಬಳಿಯಾದ್ಯಂತ ತೊಗರಿ, ಅಲಸಂದೆ, ಅವರೆ, ಮೆಕ್ಕೆಜೋಳ, ಕಡಲೆ ಕಾಯಿ, ಬಿತ್ತನೆ ಮಾಡಲಾಗಿದೆ. ಜುಲೈ ತಿಂಗಳ ಮಧ್ಯಭಾಗದಿಂದ ಆಗಸ್ಟ್ ತಿಂಗಳ ಮೊದಲ ವಾರದವರೆಗೆ ರಾಗಿ ಬಿತ್ತನೆ ಮಾಡಲಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆಯಾದ ಬೆಳೆಗಳಲ್ಲಿ ಕುಂಟೆ ಹೊಡೆದು, ಕಳೆ ಕಿತ್ತು, ಗೊಬ್ಬರ ಹಾಕಿ, ಒಳನಾಟಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ.
ನಿರಂತರ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಬಿತ್ತನೆಯಾಗಿರುವ ರಾಗಿ ಕೊಳೆಯುವ ಸ್ಥಿತಿಯಲ್ಲಿದೆ. ತೊಗರಿ, ಅವರೆ, ಅಲಸಂದೆ, ಮೇವಿನ ಜೋಳಗಳಲ್ಲಿ ಬೇರು ಕೊಳೆ ರೋಗ ಕಾಣಿಸಿಕೊಂಡಿದೆ.
ಮಳೆಯಿಂದ ಕಳೆ ಹೆಚ್ಚಾಗಿದೆ. ಬೆಳೆಗಳಿಗಿಂತ ಕಳೆಯೇ ಹೊಲಗಳಲ್ಲಿ ಕಾಣಿಸುತ್ತಿದೆ. ಒಂದಷ್ಟು ದಿನಗಳ ಕಾಲ ಮಳೆ ಬಿಡುವು ಕೊಟ್ಟಿದ್ದರೆ ಬೇಸಾಯಕ್ಕೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.