ADVERTISEMENT

ಮಣ್ಣಿನಿಂದ ಹೊರಗೆ ಬಂದ ಈಸುಳ್ಳಿ

ಮಳೆ ಬಂದ ಮರುದಿನ ಪ್ರಕೃತಿಯಲ್ಲಿ ಪರಿಣಾಮ

ಎಂ.ಮುನಿನಾರಾಯಣ
Published 26 ಮೇ 2020, 19:30 IST
Last Updated 26 ಮೇ 2020, 19:30 IST
ವಿಜಯಪುರದಲ್ಲಿ ಬೀದಿದೀಪದ ಕೆಳಗೆ ಸುತ್ತಿಕೊಂಡಿದ್ದ ಈಸುಳ್ಳಿಗಳು
ವಿಜಯಪುರದಲ್ಲಿ ಬೀದಿದೀಪದ ಕೆಳಗೆ ಸುತ್ತಿಕೊಂಡಿದ್ದ ಈಸುಳ್ಳಿಗಳು   

ವಿಜಯಪುರ: ಮಳೆ ಬೀಳುತ್ತಿದ್ದಂತೆಯೇ ಹೊರಹೊಮ್ಮುವ ಮಣ್ಣಿನ ಸುಗಂಧ ಎಂತವರನ್ನೂ ಉಲ್ಲಸಿತಗೊಳಿಸುತ್ತದೆ. ಈ ಸಂದರ್ಭದಲ್ಲಿ ನಿಸರ್ಗದಲ್ಲೂ ಹಲವು ರೀತಿಯ ಬದಲಾವಣೆಗಳು ಕಂಡುಬರುತ್ತದೆ.

ಗೆದ್ದಲು ಗೂಡಿನಿಂದ ಈಸುಳ್ಳಿಗಳು ಹೊರಬರುತ್ತಿವೆ. ಮಳೆ ಬಿದ್ದ ನಂತರ ಗೂಡಿನಿಂದ ಹೊರಬರುವ ಈಸುಳ್ಳಿಗಳಗಳನ್ನು ತಿನ್ನಲು ಹಲವು ರೀತಿಯ ಹಕ್ಕಿಗಳು, ನಾಯಿ, ಅಳಿಲುಗಳು ಸಹ ಕಾದುಕೊಂಡಿರುತ್ತವೆ. ಸಾಮಾನ್ಯವಾಗಿ ಬೇಸಿಗೆ ಕಾಲ ಮುಗಿದು, ಮಳೆ ಬೀಳುತ್ತಿದ್ದಂತೆ ರೆಕ್ಕೆ ಹೊಂದಿದ ಪುಟ್ಟ ಕೀಟಗಳು ಸಾವಿರಾರು ಸಂಖ್ಯೆಯಲ್ಲಿ ಬೆಳಕಿನ ಬಳಿ ಬರುತ್ತವೆ.

ಮಳೆಹುಳು ಎಂದು ಕರೆಯಲ್ಪಡುವ ಇವುಗಳು ರೆಕ್ಕೆ ಮೂಡಿದ ಗೆದ್ದಲುಗಳು. ಹೊಸ ಸಂಸಾರ ಹೂಡಲು ತಯಾರಾಗುವ ವಯಸ್ಸಿಗೆ ಬಂದ ಗೆದ್ದಲುಗಳಿಗೆ ರೆಕ್ಕೆ ಮೂಡುತ್ತದೆ. ತಂಪಾದ ವಾತಾವರಣವಿದ್ದಾಗ ಅವು ಗೂಡಿನಿಂದ ಹೊರಗೆ ಹಾರುತ್ತವೆ. ಇದು ಅವುಗಳ ಜೀವನದ ಮೊದಲ ಮತ್ತು ಕೊನೆಯ ಹಾರಾಟ. ಸೂಕ್ತ ಸಂಗಾತಿಯನ್ನು ಹುಡುಕಲು ನಡೆಸುವ ಹಾರಾಟವಿದು. ಸೂಕ್ತ ಸಂಗಾತಿ ಸಿಕ್ಕೊಡನೆ, ಭೂಮಿಗಿಳಿದು ತಮ್ಮ ರೆಕ್ಕೆ ಕಳಚಿಕೊಳ್ಳುವ ಇವು ಸೂಕ್ತ ಸ್ಥಳ ಹುಡುಕಿ ಚಿಕ್ಕ ಗೂಡು ನಿರ್ಮಿಸಿಕೊಳ್ಳುತ್ತವೆ. ನಂತರ ಹೆಣ್ಣು ಹುಳು ಮೊಟ್ಟೆಯಿಡಲು ಪ್ರಾರಂಭಿಸುತ್ತದೆ.

ADVERTISEMENT

ತನ್ನ ವಿಶಿಷ್ಟ ಗುಣಗಳಿಂದ ಪರಿಸರದಲ್ಲಿ ತುಂಬ ಮುಖ್ಯ ಪಾತ್ರವಹಿಸುವಂತಹ ಜೀವಿ ಗೆದ್ದಲು ಹುಳುಗಳು. ಮಾನವರಿಗಿಂತಲೂ ಎಷ್ಟೋ ಮೊದಲಿನಿಂದಲೇ ಭೂಮಿಯಲ್ಲಿ ಜೀವಿಸುತ್ತಿವೆ. ಮರಮಟ್ಟುಗಳ ಮೇಲೆ, ಒಣಗಿ ಬಿದ್ದ ದಿಮ್ಮಿಗಳ ಕೆಳಗೆ, ಭೂಮಿಯೊಳಗೆ ಇವು ತಮ್ಮ ಗೂಡು ಕಟ್ಟಿಕೊಳ್ಳುತ್ತವೆ. ಕೆಲವು ಜಾತಿಯ ಗೆದ್ದಲುಗಳು ಇಪ್ಪತ್ತು ಅಡಿಗಳಿಗಿಂತಲೂ ಹೆಚ್ಚು ಎತ್ತರವಾಗಿ ತಮ್ಮ ಗೂಡಿಗೆ ಚಿಮಣಿಯಂತೆ ಹುತ್ತವನ್ನು ನಿರ್ಮಿಸುತ್ತವೆ ಎಂದು ಪರಿಸರ ಪ್ರೇಮಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಒಣಗಿದ ಮರ, ಕೊಳೆಯುತ್ತಿರುವ ಮರ, ಕೊಳೆಯುತ್ತಿರುವ ಶಾಖಾಹಾರಿ ಪ್ರಾಣಿಗಳ ಸಗಣಿ ಮುಂತಾದವು ಇವುಗಳ ಆಹಾರ. ಮರಮಟ್ಟುಗಳಲ್ಲಿರುವ ಸೆಲ್ಯುಲೋಸ್ ಇದರ ಮುಖ್ಯ ಆಹಾರ. ರೆಕ್ಕೆ ಬಂದ ಗೆದ್ದಲು ಹುಳುಗಳನ್ನು ಗ್ರಾಮೀಣರು ಈಸುಳ್ಳಿಗಳು ಎನ್ನುತ್ತಾರೆ. ಇವೆಂದರೆ ಕೋತಿ, ಕಾಗೆ, ಕೌಜುಗ, ಗೊರವಂಕ ಮುಂತಾದ ಹಕ್ಕಿಗಳಿಗೂ ಪ್ರಿಯ. ಹುತ್ತದಲ್ಲಿ ಗೆದ್ದಲು ಹುಳುಗಳು ಎಲ್ಲ ಕಾಲದಲ್ಲೂ ಇರುವುವಾದರೂ ಅವಕ್ಕೆ ರೆಕ್ಕೆ ಬಂದು, ಬಲಿತು ಈಸುಳ್ಳಿಗಳಾದಾಗ ಮಾತ್ರ ಬೇಟೆಯಾಡಿ ತಿನ್ನುವ ಅಭ್ಯಾಸವೂ ಗ್ರಾಮೀಣರಲ್ಲಿದೆ.

‘ಮೊದಲೆಲ್ಲಾ ಈಸುಳ್ಳಿಗಳನ್ನು ಹಿಡಿದು ತಿನ್ನುವುದನ್ನು ನಾವೂ ನೋಡಿದ್ದೆವು. ಆದರೆ ಈಗ ಕಡಿಮೆಯಾಗಿದೆ. ಬೆಳಗ್ಗೆ ಹೊಲದ ಕಡೆ ಹೋದಾಗ ಹೊರಬರುತ್ತಿರುವ ಈಸುಳ್ಳಿಗಳನ್ನು ಹಲವಾರು ಹಕ್ಕಿಗಳು ಹಿಡಿದು ತಿನ್ನುತ್ತಿದ್ದವು’ ಎಂದು ಮುಖಂಡ ನಾರಾಯಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.