ವಿಜಯಪುರ: ರಾಮ ಮಂದಿರದ ನಿರ್ಮಾಣ ಮಾಡಬೇಕಾಗಿರುವ ಸ್ಥಳದಲ್ಲಿ ಬೌದ್ಧಧರ್ಮಕ್ಕೆ ಸಂಬಂಧಿಸಿದಅವಶೇಷಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಮಂದಿರದ ಬದಲಾಗಿ ಬುದ್ಧವಿಹಾರ ನಿರ್ಮಾಣ ಮಾಡಬೇಕು ಎಂದು ಬೌದ್ಧಧರ್ಮದ ಅನುಯಾಯಿಗಳುಭಾನುವಾರ ಒತ್ತಾಯಿಸಿದರು.
ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿಯ ಬುದ್ಧವಿಹಾರದಲ್ಲಿ ಆಯೋಜಿಸಿದ್ದ ‘ಪ್ರತಿಭಟನಾ ಹಕ್ಕೋತ್ತಾಯ ಸಭೆ’ಯಲ್ಲಿ ಮಾತನಾಡಿದಅಶೋಕ ವಿಹಾರದ ಮುಖ್ಯಸ್ಥ ಚೌಡಪ್ಪನಹಳ್ಳಿ ಲೋಕೇಶ್, ‘ಮಂದಿರ ನಿರ್ಮಾಣದ ಜಾಗದಲ್ಲಿ ಬೌದ್ಧಧರ್ಮಕ್ಕೆ ಸಂಬಂಧಪಟ್ಟ ಅವಶೇಷಗಳು ಸಿಕ್ಕಿರುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. ಆದ್ದರಿಂದ ಮಂದಿರದ ಜಾಗದಲ್ಲಿ ಬುದ್ಧವಿಹಾರ ನಿರ್ಮಾಣವಾಗಬೇಕು’ ಎಂದು ಕೋರಿದರು.
‘ಬುದ್ಧವಿಹಾರ ಕಟ್ಟುವ ಮೂಲಕ ದೇಶದ ಮೂಲ ನಿವಾಸಿಗಳಿಗೆ ನ್ಯಾಯ ಒದಗಿಸಬೇಕು. ಪ್ರಧಾನಿ ಮೋದಿ ಅವರೇ ಹೇಳಿದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವವನ್ನು ಅನುಸರಿಸಬೇಕು’ ಎಂದರು.
ವಕೀಲ ಸಿದ್ಧಾರ್ಥ ಮಾತನಾಡಿ, ‘ದೇಶದ ಮೂಲ ಧರ್ಮ ಬೌದ್ಧ ಧರ್ಮವಾಗಿದೆ. ಆದರೆ, ಕೆಲವು ಶಕ್ತಿಗಳುಈ ಮೂಲ ಧರ್ಮವನ್ನು ನಿರ್ನಾಮಗೊಳಿಸಲಿಕ್ಕೆ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತುಎನ್ನುವ ವಿಚಾರವನ್ನು ವ್ಯವಸ್ಥಿತವಾಗಿ ಜನರ ಮನಸ್ಸಿನಲ್ಲಿ ಬಿತ್ತಲಾಗಿದೆ. ಆದರೆ, ಅಯೋಧ್ಯೆಯಲ್ಲಿ ಇದ್ದದ್ದು ರಾಮ ಮಂದಿರ ಅಲ್ಲ; ಬುದ್ಧವಿಹಾರ.ಇದನ್ನು ನಿರ್ಮಾಣ ಮಾಡುವಲ್ಲಿ ವ್ಯತ್ಯಾಸವಾದರೆ, ಮುಂದಿನ ದಿನಗಳಲ್ಲಿ ಬ್ರಾಹ್ಮಣಶಾಹಿಯ ವಿರುದ್ಧ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.
ಬೌದ್ಧ ಧರ್ಮದ ಅನುಯಾಯಿಗಳು ಬುದ್ಧವಿಹಾರ ಸ್ಥಾಪನೆಯಾಗಬೇಕು ಎಂಬಬೋರ್ಡ್ಗಳನ್ನು ಹಿಡಿದು ಶಾಂತಿಯುತವಾಗಿ ಹಕ್ಕೋತ್ತಾಯ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.