ADVERTISEMENT

ಧಾರ್ಮಿಕ ಕಾರ್ಯಕ್ರಮ ಸಾಮರಸ್ಯ ಬೆಸೆಯುವ ಕೊಂಡಿ: ಮುನಿನಂಜಪ್ಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:20 IST
Last Updated 13 ಏಪ್ರಿಲ್ 2019, 13:20 IST
 ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮ ಪಟ್ಟಾಭಿಷೇಕ ಅಲಂಕಾರ 
 ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮ ಪಟ್ಟಾಭಿಷೇಕ ಅಲಂಕಾರ    

ದೇವನಹಳ್ಳಿ: ಮರ್ಯಾದಾ ಪುರುಷೋತ್ತಮನಾದ ಶ್ರೀರಾಮ ನವಮಿ ಅಂಗವಾಗಿ ಎಲ್ಲ ಕಡೆ ಶ್ರೀರಾಮ ನಾಮ ಜಪ ಹೋಮ ಹವನಗಳು ನಡೆದವು.

ಭಕ್ತ ಮುನಿನಂಜಪ್ಪ ಮಾತನಾಡಿ, ‘ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿಯೂ ಭಕ್ತರು ಈ ದಿನವನ್ನು ಪರಂಪರೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸಿದ ಮಹಾಕಾವ್ಯ ರಾಮಾಯಣ, ಶ್ರೀ ರಾಮತತ್ವ, ಆದರ್ಶ ನಮ್ಮ ಸಮಾಜವನ್ನು ಪ್ರಭಾವಿಸುತ್ತ ಬಂದಿವೆ. ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯ ಬೆಸೆಯುವ ಕೊಂಡಿಗಳು’ ಎಂದು ಹೇಳಿದರು.

ಇಲ್ಲಿನ ಚಿಕ್ಕ ಸಿಹಿ ನೀರಿನ ಕೆರೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಪಟ್ಟಾಭಿಷೇಕ ನಡೆಯಿತು. ಮಹೋತ್ಸವ ಅಂಗವಾಗಿ ಬೆಳಿಗ್ಗೆ 8.30ಕ್ಕೆ ಗಣಪತಿ ಪೂಜೆ, ಪುಣ್ಯಾಹವಾಚನ, ಅಭಿಷೇಕ, ಚತುಸ್ಸಮುದ್ರ ಪೂಜೆ, ಶ್ರೀರಾಮ ತಾರಕ ಹೋಮ ನಡೆಯಿತು. ನೂರಾರು ಭಕ್ತರು ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸೇವಿಸಿದರು.

ADVERTISEMENT

ನಗರದ ಪೀತಾಂಬರ ಆಂಜನೇಯ ಸ್ವಾಮಿ, ತರಗು ಪೇಟೆ ಆಂಜನೇಯ ಸ್ವಾಮಿ, ಬಂಡೆಕೆರೆ ಆಂಜನೇಯ ಸ್ವಾಮಿ, ಮದಗದಕುಂಟೆ ಆಂಜನೇಯ ಸ್ವಾಮಿ, ಬನ್ನಿಮಂಗಲ ಆಂಜನೇಯ ಸ್ವಾಮಿ, ಲಕ್ಷ್ಮಿಪುರದ ಸೀತಾರಾಮ ದೇವಾಲಯ, ಅತ್ತಿಬೆಲೆ ಶಿರಡಿ ಸಾಯಿ ಮಂದಿರ, ಕೋಟೆ ವೇಣುಗೋಪಾಲಸ್ವಾಮಿ, ಸಿದ್ದೇಶ್ವರ ಸ್ವಾಮಿ, ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು.

ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಭಕ್ತರು ಸವಿದರು. ಕೆಲವು ಕಡೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು, ಮನೆಗಳಲ್ಲೂ ಭಕ್ತರು ವಿಶೇಷವಾಗಿ ಶ್ರೀರಾಮ ನವಮಿಯನ್ನು ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.