ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ಅವೈಜ್ಞಾನಿಕ ದುಬಾರಿ ದಂಡ ವಿಧಿಸುವ ಕಾಯ್ದೆ ಹಿಂಪಡೆಯುವಂತೆ ವಿವಿಧ ಪ್ರಗತಿ ಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದವು.
ಸಿಐಟಿಯು ತಾಲ್ಲೂಕು ಘಟಕದ ಸಂಚಾಲಕ ಪಿ.ಎ.ವೆಂಕಟೇಶ್ ಮಾತನಾಡಿ, ವಾಹನ ಮಾಲೀಕರು ಉಪಯೋಗಿಸುವ ಪೆಟ್ರೋಲ್, ಡಿಸೇಲ್, ಗ್ಯಾಸ್, ತೈಲೋತ್ಪನ್ನಗಳ ಪರಿಕರ ಹಾಗೂ ವಾಹನಗಳ ಬಿಡಿಭಾಗಗಳ ಮೇಲೆ ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರ ಜತೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ನಿರ್ಮಿಸಿ ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿದೆ. ಇದೊಂದು ಹಗಲು ದರೋಡೆ ಎಂದು ದೂರಿದರು.
ಮೋಟಾರು ಕಾಯ್ದೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರ ಪರವಾನಗಿ ಇಲ್ಲದೆ ಚಾಲನೆಗೆ ₹5 ಸಾವಿರ, ವೇಗದ ಚಾಲನೆಗೆ ₹2 ಸಾವಿರ, ಅಪಾಯಕಾರಿ ಚಾಲನೆಗೆ ₹5 ಸಾವಿರ, ಮದ್ಯಸೇವಿಸಿ ಚಾಲನೆಗೆ ₹10ಸಾವಿರ, ಹೆಚ್ಚು ಪ್ರಯಾಣಿಕರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದರೆ ಮತ್ತು ವಿಮೆ ಇಲ್ಲದೆ ಚಾಲನೆ ಮಾಡಿದರೆ ₹2 ಸಾವಿರ, ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಕೊಟ್ಟರೆ ₹25 ಸಾವಿರ ದಂಡ 3ವರ್ಷ ಜೈಲು ಶಿಕ್ಷೆ ಕಾಯ್ದೆಗೆ ಅರ್ಥವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ತಾಲ್ಲೂಕು ಘಟಕದ ಗೌರವಾಧ್ಯಕ್ಷ ಚಂದ್ರ ತೇಜಸ್ವಿ ಮಾತನಾಡಿ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಶೇ 90ರಷ್ಟು ಕಾರ್ಮಿಕರು ಖಾಸಗಿ ವಲಯದಲ್ಲಿದ್ದಾರೆ. ಅವರಿಗೆ ಯಾವುದೇ ರೀತಿ ಸೇವಾ ನಿಯಮ ಸರ್ಕಾರ ಕಲ್ಪಿಸಿಲ್ಲ. ಈ ಕಾಯ್ದೆ ಸಂಪೂರ್ಣವಾಗಿ ಜಾರಿಗೊಳಿಸಿದರೆ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದು ದೇಶದಲ್ಲಿರುವ ₹7.5ಲಕ್ಷ ಕಾಯಂ ನೌಕರರು ಮತ್ತು 2.5ಲಕ್ಷ ತಾತ್ಕಾಲಿಕ ನೌಕರರು ಬೀದಿಗೆ ಬರಬೇಕಾಗುತ್ತದೆ. ಕೇಂದ್ರ ಸರ್ಕಾರ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಷೇಕ್ ಮುಸ್ತಾಪ ಮಾತನಾಡಿ, ಅಸಂಘಟಿತ ಆಟೊ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಹಾಗೂ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಿವೇಶನ, ವಸತಿ, ವ್ಯವಸ್ಥೆ ಕಲ್ಪಿಸಬೇಕು. ಸಾಮಾಜಿಕ ಭದ್ರತೆಯಡಿ ನೀಡುವ ಪ್ರತಿಯೊಂದು ಸವಲತ್ತು ಆಟೊ ಚಾಲಕರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಮಿನಿಲಾರಿ ವಾಹನ ಮತ್ತು ಚಾಲಕರ ಸಂಘ ಅಧ್ಯಕ್ಷ ಭೈರೇಗೌಡ, ಪ್ರಾಂತ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ರಾಮಕೃಷ್ಣ, ಎ.ಎಸ್.ಕೆ.ಕೆ.ವಿ ಘಟಕದ ಅಧ್ಯಕ್ಷ ಸುರೇಶ್, ಮುಖಂಡ ಇನಾಯತ್ ಪಾಷಾ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.