ದೇವನಹಳ್ಳಿ: ಹತ್ತು ವರ್ಷಗಳಿಂದ ಡೇರಿಗೆ ಹಾಲು ಪೂರೈಕೆ ಮಾಡುತ್ತಿದ್ದರು ಡೇರಿ ಕಾರ್ಯದರ್ಶಿ ಈವರೆಗೆ ಸಹಕಾರ ಸಂಘದಲ್ಲಿ ಸದಸ್ಯತ್ವ ನೊಂದಣಿ ಮಾಡಿಕೊಳ್ಳದೆ ನಿರಾಕರಿಸುತ್ತಿದ್ದಾರೆ ಎಂದು ಸಾವಕನಹಳ್ಳಿ ಗ್ರಾಮದ ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ. ಮುನಿರಾಮಯ್ಯ ದೂರಿದರು.
ಇಲ್ಲಿನ ಸಾವಕನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ‘ಹತ್ತು ವರ್ಷಗಳಿಂದ 12 ಹಾಲು ಉತ್ಪಾದಕರು ನಿರಂತರ ಡೇರಿಗೆ ಹಾಲು ಹಾಕುತ್ತಿದ್ದೇವೆ. ಹದಿನೈದು ದಿನಗಳಿಗೊಮ್ಮೆ ಬ್ಯಾಂಕ್ ಖಾತೆಯಲ್ಲಿ ಬಟವಾಡೆ ಬರುತ್ತಿದೆ. ವಾರ್ಷಿಕ ಬೋನಸ್ ನೀಡುತ್ತಿದ್ದಾರೆ. ಆರೇಳು ವರ್ಷದಿಂದ ಹತ್ತು ಬಾರಿ ಲಿಖಿತ ಮನವಿ ಮಾಡಿ ಸದಸ್ಯತ್ವ ನೋಂದಾಯಿಸಿಕೊಳ್ಳುವಂತೆ ತಿಳಿಸುತ್ತಿದ್ದರೂ ಗಮನಹರಿಸುತ್ತಿಲ್ಲ’ ಎಂದು ಆರೋಪಿಸಿದರು.
‘2018 ಸೆ.14ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಲಾಗಿತ್ತು. ಒಂದು ವಾರದೊಳಗೆ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವಂತೆ ಆದೇಶ ನೀಡಿದ್ದರೂ ನಿಬಂಧಕರು ಪರಿಗಣಿಸುತ್ತಿಲ್ಲ. ರಾಜಕೀಯ ದುರುದ್ದೇಶದಿಂದ 12 ಹಾಲು ಉತ್ಪಾದಕರನ್ನು ಸದಸ್ಯತ್ವದಿಂದ ಹೊರಗಿಡುವ ಪ್ರಯತ್ನ ಮಾಡಲಾಗುತ್ತಿದೆ. ನಿರಂತರ ಹಾಲು ಪೂರೈಕೆ ಮಾಡುತ್ತಿಲ್ಲ. ಬೇರೆ ಮನೆಯ ಹಸುಗಳ ಹಾಲು ಸಂಘಕ್ಕೆ ಪೂರೈಕೆ ಮಾಡಲಾಗುತ್ತಿದೆ. ಹಾಲು ಗುಣಮಟ್ಟದಲ್ಲಿ ಇಲ್ಲ ಎಂದು ಮನವಿಗೆ ಹಿಂಬರಹ ನೀಡಿದ್ದಾರೆ. ಹಾಲಿನ ಗುಣಮಟ್ಟವಿಲ್ಲದಿದ್ದರೆ ಪೂರೈಕೆ ನಿರಾಕರಿಸಬೇಕಿತ್ತು. ಸಕಾರಣವಿಲ್ಲದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಹೇಗೆ? ಎಂದು ಆರೋಪಿಸಿದರು.
‘ಸಹಕಾರ ಸಂಘದ ಕಾಯ್ದೆಯ ನಿಯಮಾನುಸಾರ 180 ದಿನ ಹಾಲು ಪೂರೈಕೆ ಮಾಡುವವರಿಗೆ ಸಂಘದ ಸದಸ್ಯತ್ವ ಕಡ್ಡಾಯವಾಗಿ ನೀಡಬೇಕು. ಅಮಾಯಕ ಹಾಲು ಉತ್ಪಾದಕರನ್ನು ದಿಕ್ಕು ತಪ್ಪಿಸಿ ಸಂಘದ ಬೈಲಾ ತಿದ್ದುಪಡಿ ನಿಯಮಗಳನ್ನು ಗಾಳಿಗೆ ತೂರಿ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಂಡು ಹಾಲು ಉತ್ಪಾದಕರನ್ನು ಅಲೆದಾಡಿಸುತ್ತಿರುವ ಸಂಘದ ಕಾರ್ಯದರ್ಶಿಯನ್ನು ಕೂಡಲೆ ಸಹಕಾರ ಸಂಘದ ಹಿರಿಯ ನಿಬಂಧಕರು ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಮುನಿಕೃಷ್ಣಪ್ಪ, ರವಿಕುಮಾರ್, ಸಿದ್ದಲಿಂಗ, ಸದಸ್ಯತ್ವ ವಂಚಿತರಾದ ಶಂಕರ್, ಕೆಂಪಣ್ಣ, ಎಸ್,ಎಂ,ರಾಘವೇಂದ್ರ, ಭಾಗ್ಯಮ್ಮ, ಶ್ರೀನಿವಾಸ್, ಮುನಿತಾಯಮ್ಮ, ಲಕ್ಷ್ಮಮ್ಮ, ಮುನಿರತ್ನಮ್ಮ, ಡಿ.ಮುನಿಯಪ್ಪ, ಮಂಜುಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.