ADVERTISEMENT

ಸಾಮೂಹಿಕ ವಿವಾಹ ‘ಸಪ್ತಪದಿ’ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:29 IST
Last Updated 23 ಫೆಬ್ರುವರಿ 2020, 13:29 IST
ಸಪ್ತಪದಿ ರಥಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು
ಸಪ್ತಪದಿ ರಥಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿನೂತನ ಸಪ್ತಪದಿ ಯೋಜನೆ ಪ್ರಚಾರದ ಸಲುವಾಗಿ ತಾಲ್ಲೂಕಿನ ಎಸ್.ಎಸ್.ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಮೀಪದಿಂದ ಸಪ್ತಪದಿ ರಥಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು.

ಅವರು ಮಾತನಾಡಿ, ವಿವಾಹವಾಗಲು ಅಶಕ್ತರಾಗಿರುವ ಬಡವರು ಈ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಯಲಿರುವ ಸಪ್ತಪದಿ ಯೋಜನೆಯು ಬಡ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಲಿದ್ದು, ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಮಾಹಿತಿ ನೀಡಿ, ಏಪ್ರಿಲ್ 26 ರಂದು ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು, ವಧೂವರರು ಹೆಸರು ನೊಂದಾಯಿಸಿಕೊಳ್ಳಲು ಮಾರ್ಚ್ 27 ಕೊನೆಯ ದಿನಾಂಕವಾಗಿದೆ. ಸರಳ ವಿವಾಹದಲ್ಲಿ ವರನಿಗೆ ₹5 ಸಾವಿರ, ವಧುವಿಗೆ ₹10 ಸಾವಿರ ನೀಡಲಾಗುವುದು. ಚಿನ್ನದ ತಾಳಿ, ಅಂದಾಜು 8 ಗ್ರಾಂ ತೂಕದ 2 ಚಿನ್ನದ ಗುಂಡು, ಒಟ್ಟು 55 ಸಾವಿರ ರೂಪಾಯಿ ವೆಚ್ಚವನ್ನು ದೇವಾಲಯದಿಂದ ಭರಿಸಲಾಗುವುದು ಎಂದರು.

ADVERTISEMENT

‌ಸಾಮೂಹಿಕ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ನೀಡುವ ₹10 ಸಾವಿರ ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುತ್ತದೆ. ವಧೂವರರು ಅವರ ಎಲ್ಲ ದಾಖಲೆಗಳನ್ನು ನಿಗದಿತ ದಿನಾಂಕದೊಳಗೆ ಘಾಟಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇತಿಗೆ ಸಲ್ಲಿಸಬೇಕು. ವಿವಾಹದ ಸಮಯದಲ್ಲಿ ವಧುವರರು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆಗಳನ್ನು ದೇವಸ್ಥಾನದಿಂದ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ, ದೇವನಹಳ್ಳಿ ನಗರಸಭೆ ಸದಸ್ಯ ಎನ್‌.ಎಸ್‌.ನಾಗೇಶ್‌, ಜೆಡಿಎಸ್‌ ಯುವ ಮುಖಂಡ ಗೌರೀಶ್‌, ಮುಖಂಡರಾದ ಜಗನ್ನಾಥಾಚಾರ್‌, ಮುತ್ತಣ್ಣ ಹಾಗೂ ದೇವಾಲಯದ ಅರ್ಚಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.