ADVERTISEMENT

ವಿಜ್ಞಾನ ಜೀವನದ ಅವಿಭಾಜ್ಯ ಅಂಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 12:47 IST
Last Updated 16 ಜನವರಿ 2020, 12:47 IST
ವಿಜಯಪುರದ ಜೇಸಿಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಶಾಲಾ ಮಕ್ಕಳು ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸಿದರು
ವಿಜಯಪುರದ ಜೇಸಿಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಶಾಲಾ ಮಕ್ಕಳು ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸಿದರು   

ವಿಜಯಪುರ : ಸತತ ಪರಿಶ್ರಮ, ನಿರಂತರ ಅಭ್ಯಾಸ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಜೊತೆಗೆ ಅವರ ಭವಿಷ್ಯವೂ ಉಜ್ವಲವಾಗುತ್ತದೆ ಎಂದು ಜೇಸಿಸ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಆರ್.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಅಶೋಕನಗರದಲ್ಲಿರುವ ಜೇಸಿಸ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನ ಮಾನವ ಜೀವನದ ಅವಿಭಾಜ್ಯ ಅಂಗ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವಿಷಯ ತಿಳಿದುಕೊಳ್ಳಲು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿಗಳಲ್ಲಿ ಮೂಲ, ರಾಸಾಯನಿಕ, ಭೌತ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಬೇಕು. ವಿಜ್ಞಾನವನ್ನು ಪ್ರಾಯೋಗಿಕ ಹಿನ್ನೆಲೆಯಲ್ಲಿ ಕಲಿಸುವ ಉದ್ದೇಶ ಹೊಂದಬೇಕು.

ವಿದ್ಯಾರ್ಥಿಗಳು ವಿಜ್ಞಾನದ ಪ್ರಯೋಗಗಳನ್ನು ಪ್ರತ್ಯಕ್ಷವಾಗಿ ನೋಡಿ ತಾವೂ ಕಲಿಯುವುದರಿಂದ ಪಾಠಬೋಧನೆಗೆ ತುಂಬಾ ಸಹಾಯವಾಗುತ್ತದೆ. ಪರಿಶ್ರಮ ಮತ್ತು ಆಸಕ್ತಿ ಇಲ್ಲದಿದ್ದರೇ ವಿದ್ಯಾರ್ಥಿಗಳ ಸಾಧನೆ ಶೂನ್ಯವಾಗುತ್ತದೆ. ಇವೆರೆಡೂ ಇದ್ದರೆ ಮಾತ್ರ ಉತ್ತಮ ವಿದ್ಯಾರ್ಥಿ ಯಾಗಲು ಸಾಧ್ಯ. ಜತೆಗೆ ಸಮಾಜದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರಂತರ ಕಲಿಕೆಯಲ್ಲಿ ತೊಡಗಬೇಕು. ಆಗ ಮಾತ್ರ ಶೈಕ್ಷಣಿಕವಾಗಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದು ಹೇಳಿದರು.

ಸಂಸ್ಥೆಯ ಮುಖ್ಯಶಿಕ್ಷಕ ರೆಡ್ಡಪ್ಪರೆಡ್ಡಿ ಮಾತನಾಡಿ, ಕಲಿಕೆಯಲ್ಲಿ ಪ್ರಾಯೋಗಿಕ ವಿಜ್ಞಾನ ಬಳಕೆಯಿಂದ, ವಿದ್ಯಾರ್ಥಿಗಳು ಹೆಚ್ಚು ಕೌಶಲ್ಯವನ್ನು ಸಾಧಿಸಲು ಸಹಕಾರಿಯಾಗುತ್ತದೆ. ತರಗತಿಯಲ್ಲಿ ಪಠ್ಯ ಪುಸ್ತಕದಲ್ಲಿನ ವಿಷಯವನ್ನು ಬೋಧನೆ ಮಾಡಿದರೆ ಸಾಲದು, ಅವುಗಳನ್ನು ಪ್ರಾಯೋಗಿಕ ರೀತಿಯಲ್ಲಿಯೇ ತಿಳಿಸಬೇಕು. ಇದು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುತೂಹಲಕಾರಿ ಅಂಶವನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ.

ADVERTISEMENT

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಜ್ಞಾನ ಸಂಶೋಧನೆಗಳು ಹಾಸುಹೊಕ್ಕಾಗಿವೆ. ಚರಕ, ಶುಶ್ರುತ, ಆರ್ಯಭಟ, ವರಾಹಮಿಹಿರ ಮುಂತಾದವರು ಖಗೋಳಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಕ ಜ್ಞಾನ ಅಗತ್ಯವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಪ್ರಯೋಗಗಳ ಪ್ರಾತ್ಯಕ್ಷಿಕೆಗಳ ಮೂಲಕ ಜ್ಞಾನ ಹೆಚ್ಚಿಸಲು ಮುಂದಾಗಿದ್ದೇವೆ ಎಂದರು.

ಶಾಲೆಯ ಕಾರ್ಯದರ್ಶಿ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಯುವಂತಹ ಆಸಕ್ತಿ ಮೂಡಿಸಬೇಕಾದರೆ, ಪೋಷಕರ ಸಹಕಾರವೂ ಬಹಳಷ್ಟು ಮುಖ್ಯವಾಗುತ್ತದೆ. ಮಾಹಿತಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳು ಹೆಚ್ಚಾಗಬೇಕಾಗಿದೆ ಎಂದರು.

ಶಾಲೆಯ ಮಕ್ಕಳು ವಿಜ್ಞಾನ ಮಾದರಿಗಳನ್ನು ತಯಾರಿಸಿದ್ದರು. ಕೆಲ ಮಕ್ಕಳು ವೈಜ್ಞಾನಿಕವಾಗಿ ಆಗುವಂತಹ ಬದಲಾವಣೆಗಳ ಬಗ್ಗೆ ಪ್ರಯೋಗಗಳನ್ನು ಮಾಡಿ ತೋರಿಸಿದರು.

ಶಿಕ್ಷಕರಾದ ಎನ್.ಮಮತಾ, ವಿ.ಸರಸ್ವತಿ, ಎಚ್.ಸಿ.ಅಂಬಿಕಾ, ಧನಲಕ್ಷ್ಮೀ, ಹೇಮಾವತಿ, ರಮೇಶ್, ಸತೀಶ್, ವಾಣಿಶ್ರೀ, ಎಂ.ಸುಮಾ, ಅನಸೂಯಮ್ಮ, ಶಾರದಮ್ಮ, ಅಂಬಿಕಾ, ಚೈತ್ರಾ, ಅರ್ಚನಾ, ಮೈತ್ರಿದೇವಿ, ರಮ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.