ADVERTISEMENT

ಹಾಲಿಗೆ ವೈಜ್ಞಾನಿಕ ದರ ನಿಗದಿ: ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:06 IST
Last Updated 8 ಸೆಪ್ಟೆಂಬರ್ 2025, 5:06 IST
ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮದಲ್ಲಿ ದಾನಿಗಳ ರೈತರಿಗೆ ನೀಡಿದ ಮ್ಯಾಟ್ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಹಸುಗಳನ್ನು ಮೇಲೆತ್ತುವ ಸ್ಟ್ಯಾಂಡ್ನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ವಿತರಿಸಿದರು
ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮದಲ್ಲಿ ದಾನಿಗಳ ರೈತರಿಗೆ ನೀಡಿದ ಮ್ಯಾಟ್ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಹಸುಗಳನ್ನು ಮೇಲೆತ್ತುವ ಸ್ಟ್ಯಾಂಡ್ನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ವಿತರಿಸಿದರು   

ಆನೇಕಲ್ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಬಮುಲ್ ಹಲವು ಕ್ರಮ ಕೈಗೊಂಡಿದೆ. ಹಾಲಿಗೆ ವೈಜ್ಞಾನಿಕವಾಗಿ ದರ ನಿಗದಿ ಪಡಿಸಲು ಆದ್ಯತೆ ನೀಡಲಾಗಿದೆ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ತಿಳಿಸಿದರು.

ತಾಲ್ಲೂಕಿನ ಸಮಂದೂರು ಗ್ರಾಮದಲ್ಲಿ ದಾನಿಗಳ ರೈತರಿಗೆ ನೀಡಿದ ಮ್ಯಾಟ್‌ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಹಸುಗಳನ್ನು ಮೇಲೆತ್ತುವ ಸ್ಟ್ಯಾಂಡ್‌ನ್ನು ವಿತರಿಸಿ ಮಾತನಾಡಿದರು.

ಬಮುಲ್ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ. ಹಾಲಿನ ಪೌಡರ್ ಮಾಡುತ್ತಿರುವುದರಿಂದ ಹೆಚ್ಚಿನ ಲಾಭ ದೊರೆಯುತ್ತಿಲ್ಲ. ಇದರಿಂದ ಬಮುಲ್ ಅಲ್ಪ ನಷ್ಟದಲ್ಲಿ ಮುಂದಿನ ದಿನಗಳಲ್ಲಿ ಬಮುಲ್ ಲಾಭದಾಯಕ ಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ADVERTISEMENT

ವಿವಿಧ ಡೈರಿಗಳಿಂದ 17 ಲಕ್ಷ ಲೀಟರ್ ಹಾಲು ಬಮೂಲ್‌ಗೆ ಬರುತ್ತದೆ. ಈ ಪೈಕಿ 9 ಲಕ್ಷ ಲೀಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ. 2 ಲಕ್ಷ ಲೀಟರ್ ಮೊಸರಿಗೆ ಹೋಗುತ್ತದೆ. ಉಳಿದಿದ್ದೆಲ್ಲಾ ಹಾಲಿನ ಪೌಡರ್‌ಗೆ ಬಳಕೆ ಮಾಡಲಾಗುತ್ತಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಬಮುಲ್ ಅಭಿವೃದ್ಧಿಪಡಿಸಲು ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಮಂದೂರು ಹಾಲು ಉತ್ಪಾದಕರ ಸಂಘದಲ್ಲಿ 220 ಲೀಟರ್‌ ಹಾಲು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಗ್ರಾಮದಲ್ಲಿ ಒಂದು ಸಾವಿರ ಲೀಟರ್‌ ಹಾಲು ಹಾಕಲಾಗುತ್ತಿತ್ತು. ಮತ್ತೆ ಅಷ್ಟೇ ಹಾಲು ಉತ್ಪಾದಿಸುವತ್ತ ಸಂಘ ಮತ್ತು ರೈತರು ಗಮನ ಹರಿಸಬೇಕೆಂದರು.

ಆನೇಕಲ್‌ ತಾಲ್ಲೂಕು ಗಡಿ ಭಾಗದಲ್ಲಿದೆ. ಅಭಿವೃದ್ಧಿ ಹೆಸರಿನಲ್ಲಿ ರೈತರು ಕೃಷಿ ಕಡಿಮೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯುವುದಿಲ್ಲ. ಆದರೆ ಕೃಷಿ, ಹೈನುಗಾರಿಕೆಯಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎಂಧು ಹೇಳಿದರು.

ಹಾಲು ಉತ್ಪಾದಕರಿಗೆ ಚೈತನ್ಯ ನೀಡಬೇಕು ಮತ್ತು ಪ್ರೋತ್ಸಾಹ ನೀಡಬೇಕು. ರೈತರು ಪರಸ್ಪರ ಸೇವೆ ಮತ್ತು ಪರಸ್ಪರ ಸಹಾಯದಿಂದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಮಂದೂರು ಗ್ರಾಮದ ರಾಮಣ್ಣ, ನವೀನ್‌, ಮುನಿರಾಜು, ಕೃಷ್ಣಪ್ಪ ಕುಟುಂಬದವರು ಹೈನುಗಾರಿಕೆ ಮಾಡುವವರಿಗೆ ಮ್ಯಾಟ್‌ ಮತ್ತು ಡೈರಿಗೆ ಹಸು ಎತ್ತಲು ಸ್ಟ್ಯಾಂಡ್‌ ವಿತರಿಸಿರುವುದು ಶ್ಲಾಘನೀಯ ಎಂದರು.‌

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಗೌಡ, ಲಿಂಗಣ್ಣ, ಮುಖಂಡರಾದ ಕೆಂಪರಾಜು, ಬಿ.ಪಿ.ರಮೇಶ್‌, ಮಹೇಂದ್ರ, ಜಯಣ್ಣ, ಅತ್ತಿಬೆಲೆ ಚಂದ್ರಪ್ಪ, ಮುನಿಸ್ವಾಮಿ, ಮೋಹನ್‌ ಕೃಷ್ಣ, ಮಾಜಿ ರವಿ, ಗಿರೀಶ್, ಭಾರ್ಗವ್‌ ಶ್ರೀನಾಥ್‌ ರೆಡ್ಡಿ, ರಾಮಕೃಷ್ಣ, ಮಧುಕುಮಾರ್, ಶ್ರೀನಿವಾಸ್‌ ಇದ್ದರು.

ಸಮಂದೂರು ಕೆರೆಗೆ ನೀರು

‘ಸಮಂದೂರು ಗ್ರಾಮದ ಎರಡು ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಜನ ವಿಶ್ರಾಂತಿ ನೀಡಿದ್ದರಿಂದ ಯೋಜನೆ ತಪ್ಪಿದೆ. ಮುಂದಿನ ದಿನಗಳಲ್ಲಿ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.