ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ಅವೈಜ್ಞಾನಿಕ ಎಂದು ಆರೋಪಿಸಿರುವ ಭಾರತೀಯ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ದೌರ್ಜನ್ಯ ಸಮಿತಿ, ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸೆ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದೆ.
ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ 1 ಮೀಸಲಾತಿ ಕೊಡಬೇಕು. ಭೋವಿ, ಕೊರಚಾ, ಕೊರಮ, ಲಂಬಾಣಿ ಸಮುದಾಯಗಳಿಗೆ ಕನಿಷ್ಠ ಶೇ 5 ಒಳ ಮೀಸಲಾತಿ ಘೋಷಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯ ಒಬದೇನಹಳ್ಳಿ ಕೆ.ಮುನಿಯಪ್ಪ ತಿಳಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಧುಸ್ವಾಮಿ ಅವರ ನೇತೃತ್ವದ ಸಮಿತಿ ಒಳ ಮೀಸಲಾತಿ ಕುರಿತು ಎಡಗೈ ಸಮುದಾಯಕ್ಕೆ ಶೇ 6, ಬಲಗೈ ಸಮುದಾಯಕ್ಕೆ ಶೇ5.5, ಭೋವಿ, ಕೊರಚಾ, ಕೊರಮ, ಲಂಬಾಣಿ ಸೇರಿದಂತೆ ಇತರೆ ಸಮುದಾಯಗಳಿಗೆ ಶೇ4.5 ಹಾಗೂ ಅಲೆಮಾರಿ ಸಮುದಾಯಕ್ಕೆ ಶೇ1 ನೀಡುವಂತೆ ಶಿಫಾರಸು ಮಾಡಿತ್ತು.
ಸಮಿತಿಯ ಶಿಫಾರಸ್ಸನ್ನು ಯಥಾವತ್ತಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಕೂಡ ಸರ್ಕಾರಕ್ಕೆ ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದರು. ಅಲ್ಲದೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಯಾವುದೇ ಶಿಫಾರಸು ಹಾಗೂ ನ್ಯಾಯಾಲಯದ ಆದೇಶ ಪರಿಗಣನೆಗೆ ತೆಗೆದುಕೊಳ್ಳದಂತೆ ರಾಜಕೀಯ ಕಾರಣಕ್ಕಾಗಿ ಒಳ ಮೀಸಲಾತಿ ಜಾರಿಗೊಳಿಸಿದೆ. ಇದರಿಂದ ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲ ಉಂಟಾಗಿದೆ ಎಂದು ದೂರಿದರು.
ಕೊರಮ ಕೊರಚ ಸಮುದಾಯದ ಮುಖಂಡ ಬಿ.ಜಿ.ಗೋವಿಂದರಾಜು, ಬೋವಿ ಸಮುದಾಯದ ಮುಖಂಡ ಬಸವರಾಜು, ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ಮಾರುತಿ, ಲಂಬಾಣಿ ಸಮುದಾಯದ ಮುಖಂಡ ಅಂಜನಾ ನಾಯಕ್, ಮಂಜುನಾಥ್ ನಾಯಕ್ ಇದ್ದರು.
ಅಲೆಮಾರಿಗಳಿಗೆ ಅನ್ಯಾಯ
ಒಳಮೀಸಲಾತಿ ಜಾರಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ1 ಒಳ ಮೀಸಲಾತಿ ನೀಡಬೇಕಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಭಾರತೀಯ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ದೌರ್ಜನ್ಯ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.