ದೇವನಹಳ್ಳಿ: ‘ವಿಚಾರ ಸಂಕಿರಣಗಳಿಂದ ಅನೇಕ ವಿಷಯಗಳ ಮಾಹಿತಿ ಸಿಗಲಿದ್ದು, ಸಂಶೋಧನೆಗೆ ಪೂರಕವಾಗಲಿದೆ‘ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಮಹಿಳೆಯರ ಸ್ಥಿತ್ಯಂತರಗಳು, ಸಾಧನೆ ಮತ್ತು ಪರಿಣಾಮ ಹಾಗೂ ಸವಾಲುಗಳ ಬಗ್ಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತದ ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಆದರೂ, ಕೆಲವೊಂದು ಕಟ್ಟುಪಾಡುಗಳು ಮಹಿಳೆಯರನ್ನು ವಿಚಲಿತರನ್ನಾಗಿ ಮಾಡಿವೆ. ಆಧುನಿಕತೆಯಲ್ಲಿ ಬದಲಾವಣೆ ಎಂಬುದು ಶರವೇಗದಲ್ಲಿ ಸಾಗುತ್ತಿದೆ. ಇಂತಹ ವಿಚಾರಸಂಕಿರಣಗಳು ಪರಸ್ಪರ ಚರ್ಚೆಗೆ ಅವಕಾಶ ಮಾಡಿಕೊಡುವುದರ ಜತೆಗೆ ಪ್ರಬಂಧ ಮಂಡನೆಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.
‘1984ರಲ್ಲಿ 25 ರಿಂದ 30 ವಿದ್ಯಾರ್ಥಿಗಳಿಂದ ಆರಂಭಗೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಲ ಸೌಲಭ್ಯಗಳನ್ನು ಹೊಂದಿ 2017ನೇ ಸಾಲಿನಿಂದ ನ್ಯಾಕ್ ‘ಬಿ’ ದರ್ಜೆಯಲ್ಲಿ ಮಾನ್ಯತೆ ಪಡೆದು ರೂಸಾದಲ್ಲಿ ಸ್ಥಾನ ಪಡೆದಿದೆ. ಇದು ಬದಲಾವಣೆಯ ಪ್ರತೀತವಾಗಿದೆ. ಶೈಕ್ಷಣಿಕವಾಗಿ ಯಾವುದೇ ಮೂಲ ಸೌಲಭ್ಯ ಒದಗಿಸಲು ನನ್ನ ಸಹಕಾರವಿದೆ’ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ.ಜಮುನಾ ರೆಡ್ಡಿ ಮಾತನಾಡಿ,‘ಮಹಿಳೆಯರ ಸ್ಥಿತ್ಯಂತರಗಳು ಸಾಧನೆ ಮತ್ತು ಪರಿಣಾಮ ಹಾಗೂ ಸವಾಲುಗಳು ಎಂಬುದು ಪ್ರಸ್ತುತ ಸಂದರ್ಭದಲ್ಲಿ ಉತ್ತಮ ವಿಷಯವಾಗಿದೆ. ಗ್ರಾಮೀಣ ಮಹಿಳೆಯರ ಸಂಕಷ್ಟ, ಸ್ಥಿತಿಗತಿ, ಅವರ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಶತಮಾನಗಳ ಪರಿಸ್ಥಿತಿಗೂ ಇಂದಿನ ವಾಸ್ತವ ಸ್ಥಿತಿಗೂ ಯಾವ ರೀತಿ ಬದಲಾವಣೆಯಾಗಿದೆ. ಯಾವ ರೀತಿಯ ಸವಾಲುಗಳು ಜೀವಂತ ಇವೆ. ಪರಿಣಾಮ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಆರ್ಥ ಮಾಡಿಕೊಳ್ಳಬಹುದು’ ಎಂದರು.
ಪ್ರೊ.ಎಂ.ಡಿ.ಭಾವಯ್ಯ, ಉಪನ್ಯಾಸಕ ಡಾ.ನಾರಾಯಣ, ಪ್ರಾಂಶುಪಾಲ ಕೆ.ಎಸ್.ಶಿವಶಂಕರಪ್ಪ, ಉಪನ್ಯಾಸಕರಾದ ನೀರಜಾ ದೇವಿ, ಸಜ್ಜದ್ ಪಾಷ, ಕೆ.ಕೆ.ರವಿಚಂದ್ರ, ಕೆಂಪೇಗೌಡ, ಕೃಷ್ಣ ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಣ್ಣ, ಹಾಪ್ ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ಮುಖಂಡ ಕೆ.ವೆಂಕಟೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.