ದೊಡ್ಡಬಳ್ಳಾಪುರ: ‘ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಚಲ ಸದ್ಗುರು ಸಂಜೀವಾನಂದಾರ್ಯ ಸೇವಾಶ್ರಮದ ಮುಖ್ಯಸ್ಥ ಎನ್.ಪುಟ್ಟರಾಜು, ‘ಹಿರಿಯ ನಾಗರಿಕರು ತಮ್ಮ ವಿಶ್ರಾಂತ ಜೀವನದಲ್ಲಿ ಸಾಹಿತ್ಯ ಪ್ರಕಾರಗಳಾದ, ಕತೆ ಕಾದಂಬರಿಗಳನ್ನು ಓದುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕ ಆರೋಗ್ಯವು ಉತ್ತಮವಾಗಿರಲು ಸಾಧ್ಯ. ಹಿರಿಯ ನಾಗರಿಕರ ಪರವಾದ ಹಲವಾರು ಕಾನೂನುಗಳು ಇಂದು ಜಾರಿಗೆ ಬಂದಿರುವುದು ಸ್ವಾಗತಾರ್ಹ. ಯಾವುದೇ ಒಂದು ಸಮಾಜದಲ್ಲಿ ಕುಟುಂಬಗಳು ಎಲ್ಲಾ ರೀತಿಯಲ್ಲೂ ಸದೃಢವಾಗಿರಲು ಹಿರಿಯ ನಾಗರಿಕರ ಸಲಹೆ, ಅವರ ಅನುಭವಗಳನ್ನು ಪಡೆಯುವುದು ಮುಖ್ಯ. ಇದು ಕುಟುಂಬಕ್ಕಷ್ಟೇ ಅಲ್ಲದೆ ಸರ್ಕಾರದ ಆಡಳಿತಕ್ಕೂ ಸಹ ಅನ್ವಯವಾಗಲಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ‘ನಮ್ಮ ಸಂಸ್ಕೃತಿಯ ಪ್ರತೀಕದಂತಿರುವ ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ. ಸಾರ್ಥಕ ಜೀವನ ನಡೆಸಿದ ಹಿರಿಯ ನಾಗರಿಕರನ್ನು ಗೌರವಿಸುವುದು ಸಾಹಿತ್ಯ ಪರಿಷತ್ಗೆ ಹೆಮ್ಮೆಯ ವಿಷಯ’ ಎಂದರು.
ಕಾರ್ಯಕ್ರಮದ ಅಂಗವಾಗಿ ರತ್ನಮ್ಮ ಸಂಜೀವಾನಂದಾರ್ಯ, ನಾಗರತ್ನ ರಾಮಚಂದ್ರಪ್ಪ, ಗಂಗಮ್ಮ ಕಾಂತಪ್ಪ, ಎನ್.ಪುಟ್ಟರಾಜು, ಪಿಳ್ಳಪ್ಪಸ್ವಾಮಿ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಪ್ರವೀಣ್ಕುಮಾರ್,ರಾಕೇಶ್, ಮೀನಮ್ಮ, ನಂ.ಮಹಾದೇವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.