ADVERTISEMENT

ಧರ್ಮ ಬೇರೆ, ರಾಜಕೀಯವೇ ಬೇರೆ; ದಲಿತ ಸಿ.ಎಂ. ಬಗ್ಗೆ ಬಿಕ್ಷೆ ಬೇಡಲು ಆಗಲ್ಲ: ಖರ್ಗೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 5:11 IST
Last Updated 26 ಜುಲೈ 2021, 5:11 IST
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ   

ದೇವನಹಳ್ಳಿ: ‘ಧರ್ಮ ಬೇರೆ, ರಾಜಕೀಯವೇ ಬೇರೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಎಲ್ಲ ಧರ್ಮೀಯರೂ ಇರುತ್ತಾರೆ. ಮಠಾಧೀಶರು ಈ ವಿಚಾರ ಅರ್ಥ ಮಾಡಿಕೊಳ್ಳಬೇಕು’ ಪರೋಕ್ಷವಾಗಿ ಮಠಾಧೀಶರು ರಾಜಕಾರಣಕ್ಕೆ ಪ್ರವೇಶಿಸಬಾರದು’ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ‘ರಾಜಕೀಯಕ್ಕೆ ಧರ್ಮದ ಲೇಪನವಾಗಬಾರದು. ಇದು ಅಪಾಯಕಾರಿ ಬೆಳವಣಿಗೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕಮ್ಯುನಿಸ್ಟ್ ಹೀಗೆ ಎಲ್ಲ ಪಕ್ಷಗಳಲ್ಲಿ ಎಲ್ಲ ಧರ್ಮಗಳ ಜನರೂ ಇದ್ದಾರೆ. ಮಠಾಧೀಶರು ಒಂದು ಧರ್ಮದ ಪರವಾಗಿ ನಿಲ್ಲಬಾರದು’ ಎಂದರು.

‘ಬಿಜೆಪಿಯಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವ ವಿಚಾರ ಅವರಿಗೆ ಬಿಟ್ಟಿದ್ದು, ಬೇರೆ ಪಕ್ಷಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಅವರ ಬಳಿ ಭಿಕ್ಷೆ ಬೇಡೋಕೆ ಆಗಲ್ಲ. ಯಾರನ್ನು ತೆಗೆಯಬೇಕು. ಯಾರಿಗೆ ಕೊಡಬೇಕು, ಎನ್ನುವುದನ್ನು ಆ ಪಕ್ಷ ನಿರ್ಧರಿಸಲಿ, ರಾಜ್ಯದಲ್ಲಿನ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ’ ಎಂದರು.

ADVERTISEMENT

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅತಿವೃಷ್ಟಿಯಾಗಿ ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗಾಗಿ ಏನು ಮಾಡಬೇಕು ಎನ್ನುವುದನ್ನು ಸರ್ಕಾರ ಚಿಂತನೆ ನಡೆಸಿ, ಅವರ ಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸುವ ಕೆಲಸ ಮಾಡಬೇಕು. ಬೆಳೆ ನಷ್ಟ ಮಾಡಿಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತಹ ಕೆಲಸ ಮಾಡಬೇಕು ಎಂದುಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.