ದೊಡ್ಡಬಳ್ಳಾಪುರ:ನಗರದ ಕನ್ನಡ ಜಾಗೃತ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ತಾಲ್ಲೂಕು ಘಟಕದಿಂದ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವು ಪಟ್ಟಣದ ಜಾಗೃತ ಭವನದಲ್ಲಿ
ನಡೆಯಿತು.
ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಯ ಮುಖಂಡರು, ಸುಬ್ಬಣ್ಣ ಅವರ ಸಾಧನೆಯನ್ನು ಸ್ಮರಿಸಿದರು.
ಕನ್ನಡಕ್ಕೆ ಗಾಯನದಲ್ಲಿ ಪ್ರಥಮ ರಾಷ್ಟ್ರಪ್ರಶಸ್ತಿ ತಂದುಕೊಟ್ಟು ನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದು ಅವರ ಹೆಗ್ಗಳಿಕೆ. ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಪ್ರತಿಮ ಸಾಧಕ ಎಂದು ಬಣ್ಣಿಸಿದರು.
ಭಾವಗೀತೆಗಳಿಗೆ ಜೀವತುಂಬಿ ಹಾಡುತ್ತಿದ್ದ ಸುಬ್ಬಣ್ಣ ಹಲವು ಯುವ ಗಾಯಕರಿಗೆ ಸ್ಫೂರ್ತಿಯಾಗಿದ್ದಾರೆ. ಇಂದಿನ ಗಾಯಕರು, ಇನ್ನೊಬ್ಬರ ಹಾಡಿನ ಧಾಟಿ ಅನುಸರಿಸದೆ ಹೊಸತನಕ್ಕೆ ಒತ್ತು ನೀಡಬೇಕು. ಗಾಯಕರಿಗೆ ಸುಬ್ಬಣ್ಣ ಅವರ ಆದರ್ಶ ಮಾದರಿಯಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯಕ್, ಮುನಿಪಾಪಯ್ಯ, ಪರಮೇಶ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ. ಆಂಜಿನೇಯ, ಖಜಾಂಚಿ ಮುರಳಿ, ಮಾಜಿ ಅಧ್ಯಕ್ಷ ಬಿ.ಜಿ. ಅಮರನಾಥ್, ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಡಿ. ಶ್ರೀಕಾಂತ, ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.